ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ – ಸಮಾರೋಪ ಸಮಾರಂಭ

ಪಟ್ಲ ಫೌಂಡೇಶನ್ (ರಿ) ಮಂಗಳೂರು, ವಿಟ್ಲ ಘಟಕದ ವತಿಯಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಯಕ್ಷದ್ರುವ ಯಕ್ಷ ಶಿಕ್ಷಣ – ಯಕ್ಷಗಾನ ಅಭ್ಯಾಸ ತರಗತಿಯ ಸಮಾರೋಪ ಸಮಾರಂಭ ದಿನಾಂಕ 23-01-2026 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶಾಲಾ ಸಭಾಂಗಣದಲ್ಲಿ ಜರುಗಿತು.

ಅತಿಥಿಗಳಾಗಿ ಭಾಗವಹಿಸಿದ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, “ಅವಕಾಶ ವಂಚಿತ ಸರಕಾರಿ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿರುವ ಯಕ್ಷದ್ರುವ ಯಕ್ಷ ಶಿಕ್ಷಣವು ಯಕ್ಷಗಾನದ ಅರಿವಿನ ಜೊತೆಗೆ ಸಂಸ್ಕಾರ ಭರಿತ ಜೀವನವನ್ನು ಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ. ಪುರಾಣದ ಜ್ಞಾನಗಳನ್ನು ಬೆಳೆಸುವುದರ ಜೊತೆಗೆ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ವೇದಿಕೆ ಮೇಲೆ ತನ್ನ ಪ್ರತಿಭೆಯನ್ನು ತೋರ್ಪಡಿಸುವ ಮಕ್ಕಳು ಮುಂದೆ ಸಮಾಜದಲ್ಲಿ ಕೊಡುಗೆಗಳಾಗಿ ಮೂಡಿ ಬರುತ್ತಾರೆ.” ಎಂದರು

ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪೂವಪ್ಪ ಶೆಟ್ಟಿ ಅಳಿಕೆ ಮಾತನಾಡಿ, “ಯಕ್ಷಗಾನ ಕಲೆಯನ್ನು ವೃತ್ತಿಜೀವನಕ್ಕೆ ಆಧಾರವಾಗಿಟ್ಟುಕೊಂಡು ಬೆಳೆಯಬೇಕಾಗಿಲ್ಲ. ವೃತ್ತಿಯೊಟ್ಟಿಗೆ ಪ್ರವೃತ್ತಿಯಾಗಿ ಬೆಳೆಸಿಕೊಂಡು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಯಕ್ಷ ಶಿಕ್ಷಣದ ಯೋಜನೆಯಡಿ ಸಾವಿರಾರು ಮಕ್ಕಳು ಯಕ್ಷಗಾನದತ್ತ ಒಲವು ತೋರಿಸುತ್ತಿರುವುದು ಯಕ್ಷಗಾನ ರಂಗಕ್ಕೊಂದು ಒಳ್ಳೆಯ ಬೆಳವಣಿಗೆ” ಎಂದು ನುಡಿದರು.

ಸಭಾ ವೇದಿಕೆಯ ಗಣ್ಯರು ಯಕ್ಷಗಾನದಲ್ಲಿ ಭಾಗವಹಿಸಿದ ಮಂಚಿ ಕೊಳ್ಳಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ಯಕ್ಷಗಾನ ಪಾತ್ರಧಾರಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ ವಿದ್ಯಾರ್ಥಿಗಳಿಗೆ ಅಧ್ಯಕ್ಷೀಯ ಸ್ಥಾನದಲ್ಲಿ ಮಾತನಾಡಿ ಶುಭ ಹಾರೈಸಿದರು. ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು, ಯಕ್ಷಗಾನ ಗುರುಗಳಾದ ಅಶ್ವತ್ಥ್ ಮಂಜನಾಡಿ ವಿದ್ಯಾರ್ಥಿಗಳ ಯಕ್ಷಗಾನ ಕಲಿಕೆಯ ಪ್ರಗತಿಯನ್ನು ಪ್ರಶಂಸಿಸಿದರು. ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಶಾಂತ, ಸಮಾಜ ವಿಜ್ಞಾನ ಶಿಕ್ಷಕರಾದ ಜಗನ್ನಾಥ ಪುರುಷ ಹಾಗೂ ಶಿಕ್ಷಕ ಮತ್ತು ಸಿಬ್ಬಂದಿ ವೃಂದದವರೆಲ್ಲ ಉಪಸ್ಥಿತರಿದ್ದರು.

ಚಿತ್ರ ಕಲಾವಿದ ತಾರಾನಾಥ್ ಕೈರಂಗಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!