ಮಂಜೇಶ್ವರ: ಕೆಎನ್ಎಂ ಜಿಲ್ಲಾ ಸಮಿತಿಯ ವತಿಯಿಂದ ಕಳೆದ ನಾಲ್ಕು ತಿಂಗಳಿನಿಂದ “ಆಧ್ಯಾತ್ಮಿಕ ಶೋಷಣೆ ಹಾಗೂ ವಾಮಾಚಾರದ ವಿರುದ್ಧ” ಎಂಬ ಕಾರ್ಯಸೂಚಿಯಂತೆ ಆಯೋಜಿಸಿದ್ದ ಅಭಿಯಾನದ ಸಮಾರೋಪ ಅಧಿವೇಶನವು ಮಾನವ ಸಂಪತ್ತು ಮತ್ತು ಘನತೆಯನ್ನು ಶೋಷಿಸುವ ಸುಳ್ಳು ಆಧ್ಯಾತ್ಮಿಕತೆಯ ಪ್ರತಿಪಾದಕರ ಹಾಗೂ ಕಪಟ ಮಂತ್ರವಾದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ಎಲ್ಲಾ ಆಧ್ಯಾತ್ಮಿಕ ಶೋಷಣೆಗಳನ್ನು ಕೊನೆಗೊಳಿಸುವಂತೆ ಕರೆ ನೀಡಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ. ಉಣ್ಣೀನ್ ಕುಟ್ಟಿ ಮೌಲವಿ ಸಮಾರೋಪ ಸಮಾರಂಭ ಉದ್ಘಾಟಿಸಿದರು.
ಆಧ್ಯಾತ್ಮಿಕ ಶೋಷಣೆ ದಿನೇ ದಿನೇ ಮುಂದುವರಿದು ಎಲ್ಲಿಂದೆಲ್ಲಿಗೆ ಹರಡುತ್ತಿದ್ದು ಇದಕ್ಕೊಂದು ನಿಯಂತ್ರಣವನ್ನು ಏರ್ಪಡಿಸದೇ ಇದ್ದರೆ ಇದು ಸಮಾಜವನ್ನು ದೊಡ್ಡ ವಿನಾಶದತ್ತ ಕೊಂಡೊಯ್ಯಬಹುದು ಎಂಬುದಾಗಿ ಅವರು ಎಚ್ಚರಿಕೆಯ ಕರೆಗಂಟೆ ಬಾರಿಸಿದರು.
ಇತ್ತೀಚೆಗೆ ಒಬ್ಬ ಧಾರ್ಮಿಕ ಗುರು ತನ್ನ ಪತ್ನಿ ಮನೆಯಲ್ಲೇ ಹೆರಿಗೆ ಮಾಡಬೇಕೆಂದು ವಾದಿಸಿದ ಕಾರಣ ಆಕೆಯ ಸಾವು ಸಂಭವಿಸಿತು. ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ತಪ್ಪಿಸಿ, ಹೆರಿಗೆಗೆ ಮನೆಗಳನ್ನು ಆಯ್ಕೆ ಮಾಡುವುದು ಆತ್ಮಹತ್ಯೆಗೆ ಸಮಾನ. ಎಂದು ಹೇಳಿದ ಅವರು ಇಸ್ಲಾಮಿನ ದೃಷ್ಟಿಕೋನದಿಂದ, ಎಲ್ಲಾ ರೋಗಗಳಿಗೂ ಚಿಕಿತ್ಸೆ ಇದೆ ಹಾಗೂ ಅವುಗಳಿಗೆ ಚಿಕಿತ್ಸೆಯೇ ಸೂಕ್ತ ಪರಿಹಾರ ಎಂದು ಅವರು ಹೇಳಿದರು.
ಮೊಯಿದೀನ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಹ್ಮದ್ ವೆಳಿಚ್ಚಂ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಎಸ್ಕೆಎಸ್ಎಂ ಅಧ್ಯಕ್ಷ ಬಶೀರ್ ಅಹಮದ್ ಶಾಲಿಮಾರ್, ಐಎಸ್ಎಂ ಅಧ್ಯಕ್ಷ ಅಕ್ಬರ್ ಎಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾರಿಸ್ ಚೆರೂರ್, ಎಂಎಸ್ಎಂ ಜಿಲ್ಲಾಧ್ಯಕ್ಷ ಅಲಿ ಸಲಫಿ, ಕೆಎನ್ಎಂ ಜಿಲ್ಲಾ ಖಜಾಂಚಿ ಅಬ್ದುಲ್ ರಹಮಾನ್ ಅರಿಮಲ ಮತ್ತಿತರರು ಶುಭ ಹಾರೈಸಿದರು. ಶುಕೂರ್ ಸ್ವಲಾಹಿ ಮತ್ತು ಉನೈಸ್ ಪಪ್ಪೋಣಶ್ಶೇರಿ ಮುಖ್ಯ ಭಾಷಣ ಮಾಡಿದರು