ಮಂಜೇಶ್ವರ: ಮಂಜೇಶ್ವರ ಸಮೀಪದ ಪಾವೂರಿನಲ್ಲಿ ವ್ಯಕ್ತಿಯೊಬ್ಬರನ್ನು ಮನೆಯಿಂದ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪಾವೂರು ಕೊಂಬಂಗುದಿಯ ಅಬ್ದುಲ್ ರಹಮಾನ್ ಎಂಬುವವರನ್ನು ಫೆಬ್ರವರಿ 20ರಂದು ರಾತ್ರಿ 10:30 ಗಂಟೆಗೆ ಕಾರಿನಲ್ಲಿ ಬಂದ ನಾಲ್ವರ ತಂಡ ಬಲವಂತವಾಗಿ ಕರೆದೊಯ್ದಿತ್ತು. ಈ ಕುರಿತು ಅಬ್ದುಲ್ ರಹಮಾನ್ ಅವರ ಪತ್ನಿ ತಾಹಿರಾ ಪೊಲೀಸರಿಗೆ ದೂರು ನೀಡಿದ್ದರು.ಇದರಂತೆ ಮಂಜೇಶ್ವರ ಠಾಣಾಧಿಕಾರಿ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಪಾವೂರು ಕುಂಡಾಪ್ಪು ನಿವಾಸಿ ಗಫೂರ್ (29), ಮಚ್ಚಂಪಾಡಿ ನಿವಾಸಿ ಅಬೂಬಕರ್ ಅನಾಸ್ (27), ಕಾಯರ್ಕಟ್ಟೆ ನಿವಾಸಿ ಮೊಹಮ್ಮದ್ ಸಿಹಾಬ್ (42) ಹಾಗೂ ಕರ್ನಾಟಕ ಬಂಟ್ವಾಳ ನಿವಾಸಿ ಮೊಹಮ್ಮದ್ ರಫೀಕ್ (27) ಎಂಬವರನ್ನು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಅಬ್ದುಲ್ ರಹಮಾನ್ ಅವರು ತಮ್ಮ ಮಗನ ವ್ಯಾಪಾರಕ್ಕಾಗಿ ಆರೋಪಿಗಳಲ್ಲೊಬ್ಬರ ಸಹೋದರಿಯ ಚಿನ್ನಾಭರಣಗಳನ್ನು ಪಡೆದಿದ್ದರು. ಹಲವಾರು ವರ್ಷಗಳಾದರೂ ಆಭರಣಗಳನ್ನು ಮರಳಿಸದ ಕಾರಣ, ಈ ತಂಡವು ಅವರನ್ನು ಮನೆಯಿಂದ ಮೈಸೂರಿಗೆ ಕರೆದೊಯ್ದಿತ್ತು.ಮೈಸೂರಿನಲ್ಲಿ ಇತ್ತಂಡಗಳ ನಡುವೆ ಮಾತುಕತೆ ನಡೆದು ಒಂದು ಒಪ್ಪಂದಕ್ಕೆ ಬರಲಾಗಿತ್ತು. ಬಳಿಕ ಅಬ್ದುಲ್ ರಹಮಾನ್ ಅವರನ್ನು ಮರಳಿ ಊರಿಗೆ ಕರೆತರುತ್ತಿದ್ದಾಗ, ಪೊಲೀಸರು ಅರ್ಧ ದಾರಿಯಲ್ಲೇ ಆರೋಪಿಗಳನ್ನು ಹಿಡಿದು ವಶಕ್ಕೆ ಪಡೆದಿದ್ದರು.