ಉಡುಪಿ ಕಂಬಳಕ್ಕೆ ಭೂಮಿ ಹಸ್ತಾಂತರವಾಗಿಲ್ಲ; ಭೂಮಿ ಪೂಜೆ ಕಾನೂನು ಬಾಹಿರ-ವಿನಯಕುಮಾರ್ ಸೊರಕೆ

ಉಡುಪಿ: 80 ಬಡಗುಬೆಟ್ಟುವಿನಲ್ಲಿ ನಡೆಯುವ ಉಡುಪಿ ಕಂಬಳಕ್ಕೆ ಜಿಲ್ಲಾಡಳಿತದಿಂದ 6.30 ಎಕರೆ ಭೂಮಿ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಫೆ.28ರಂದು ಕಾಪು ಶಾಸಕರ ನೇತೃತ್ವದಲ್ಲಿ ನಡೆದ ಕಂಬಳ ಕರೆಯ ಭೂಮಿ ಪೂಜೆ ಕಾನೂನು ಬಾಹಿರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕಂಬಳ ನಡೆಸುವುದಕ್ಕೆ ತನ್ನ ಅಭ್ಯಯಂತರವಿಲ್ಲ. ಆದರೆ ಅದು ಬಿಜೆಪಿ ಪಕ್ಷದ ಕಂಬಳ ಆಗಬಾರದು. ಜಿಲ್ಲಾಡಳಿತ ಕಂಬಳ ಆಗಬೇಕು. ಸ್ಥಳೀಯ ಜನರಿಗೆ ಕಂಬಳದಿಂದ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಆಗಬೇಕೆಂದು ಅವರು ಒತ್ತಾಯಿಸಿದರು‌.


ಜನಪ್ರತಿನಿಧಿಗಳು ಜಿಲ್ಲಾಡಳಿತ ಹೊರಡಿಸಿರುವ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶಂಕುಸ್ಥಾಪನೆ ನಡೆಸಿದ್ದಾರೆ. ಶಾಸಕರು ತಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ತನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಶಾಸಕರು ತಮ್ಮ ಕಾನೂನು ಬಾಹಿರ ಜೂಜು ನಡೆಸುವ ಹಿಂಬಾಲಕರಿಗಾಗಿ ಈ ಕಂಬಳ ನಡೆಸುತ್ತಿದ್ದಾರೆ. ಬಡಗುಬೆಟ್ಟು ಪಂಚಾಯತ್ ನಲ್ಲಿ ಬಡವರಿಗೆ ಐದು ಸೆಂಟ್ಸ್ ಭೂಮಿ ನೀಡದ ಶಾಸಕರು ಅರಣ್ಯ ಇಲಾಖೆಯ 6.30 ಎಕರೆ ಭೂಮಿಯಲ್ಲಿ ಕಂಬಳ ಮಾಡಲು ಹೊರಟಿದ್ದಾರೆ. ಅರಣ್ಯ ಇಲಾಖೆ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

40 ವರ್ಷಗಳಿಂದ 10 ಕುಟುಂಬಗಳು ಕೃಷಿ ಮಾಡಿಕೊಂಡು ವಾಸಿಸುತ್ತಿದ್ದಾರೆ. ಅವರಿಗೆ ಈ ಕಂಬಳದಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾನೆ. ಮಾ. 4ರಂದು ಜಿಲ್ಲಾಡಳಿತ ವತಿಯಿಂದ ನಡೆಸಲು ಉದ್ದೇಶಿಸಿರುವ ಶಂಕುಸ್ಥಾಪನೆಯನ್ನು ಕೈಬಿಡಲಾಗಿದೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!