ಮಂಗಳೂರು: ನಗರಗಳ ಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಯತ್ತ ದಾರಿ ತೋರಿಸುವ ಉದ್ದೇಶದಿಂದ “ಮಂಗಳೂರು ಡಿಸೈನ್ ಸಮಿಟ್ 2026” ಕಾರ್ಯಕ್ರಮವು ಮಾರ್ಚ್ 7 ಹಾಗೂ 8ರಂದು ನಗರದ St Aloysius Deemed to be Universityಯಲ್ಲಿ ನಡೆಯಲಿದೆ ಎಂದು ಸಮಿತಿಯ ನಿರ್ದೇಶಕಿ ಅಲ್ಕಾ ಮನೋಜ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿಟ್ನ ಪ್ರಮುಖ ಭಾಷಣಗಳು ಎರಿಕ್ ಮಥಿಯಾಸ್ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಾಗಾರಗಳು ಮದರ್ ತೆರೇಸಾ ಪೀಸ್ ಪಾರ್ಕ್ನಲ್ಲಿ ಆಯೋಜಿಸಲಾಗಿದೆ ಎಂದರು. ನಗರ ಯೋಜನೆ, ಸಮುದ್ರ ಪರಿಸರಶಾಸ್ತ್ರ, ಕಸದ ನಿರ್ವಹಣೆ, ಪಾರಂಪರಿಕ ಸಂರಕ್ಷಣೆ ಹಾಗೂ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ 20ಕ್ಕೂ ಹೆಚ್ಚು ತಜ್ಞರು ಈ ಸಮಿಟ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖ ಭಾಷಣಗಾರರಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ಬೇರೂ ಕಲೆಕ್ಟಿವ್ ಸಂಸ್ಥಾಪಕಿ ದಿವ್ಯ ಹೆಗ್ಡೆ, ವಾಸ್ತುಶಿಲ್ಪಿ ಹಾಗೂ ನಗರ ಯೋಜಕ ಅಶೋಕ್ ಮೆಂಡೋನ್ಸಾ, ಗ್ರೀನ್ ಎಕ್ಸ್ಪರ್ಟ್ಸ್ ಸಂಸ್ಥಾಪಕಿ ಶೆರಾನ್ ಡಿಸೋಜಾ ಸೇರಿದಂತೆ ಹಲವು ತಜ್ಞರು ಭಾಗವಹಿಸಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ನಗರವು ಭಾರೀ ಮಳೆಯ ಪರಿಣಾಮವಾಗಿ ಉಂಟಾಗುವ ಪ್ರವಾಹ, ಕರಾವಳಿ ಕುಸಿತ, ಉಷ್ಣಾಂಶ ಏರಿಕೆ, ಕಸದ ನಿರ್ವಹಣಾ ಸವಾಲುಗಳು ಹಾಗೂ ವೇಗವಾದ ನಿರ್ಮಾಣ ಮತ್ತು ಮೂಲಸೌಕರ್ಯ ವಿಸ್ತರಣೆ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಇದಲ್ಲದೆ ಕರಾವಳಿ ಹೇರಿಟೇಜ್ ಕಲೆಕ್ಟಿವ್, ಆಂಟಿ ಪಾಲ್ಯೂಷನ್ ಡ್ರೈವ್, ಹಸಿರು ದಳ, ಅನಿಮಲ್ ಕೇರ್ ಟ್ರಸ್ಟ್ ಸೇರಿದಂತೆ ಹಲವು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿಟ್ನಲ್ಲಿ ಭಾಗವಹಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಚಾರ್ಲೀನ್ ಸಿಕ್ವಿಯೆರಾ ಮತ್ತು ಅಂಜಲಿ ರಾವ್ ಉಪಸ್ಥಿತರಿದ್ದರು.