ಬಂಟ್ವಾಳ: ಇಲ್ಲಿನ ತಲಪಾಡಿ ಪ್ರದೇಶದಲ್ಲಿರುವ ಆಟೋ ಗ್ಯಾಸ್ ಪಂಪ್ನಲ್ಲಿ ಏಕಾಏಕಿ ಯಾವುದೇ ಸೂಚನೆ ನೀಡದೇ ರೂ.10 ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಬಂಟ್ವಾಳ ತಾಲೂಕಿನ ಕೈಕಂಬ ಸಮೀಪದ ತಲಪಾಡಿ ಮಹಾಲಕ್ಷ್ಮಿ ಆಟೋ ಗ್ಯಾಸ್ ಪಂಪ್ನಲ್ಲಿ ಕೆ.ಜಿ.ಗೆ ನಿಗದಿತ ದರಕ್ಕಿಂತ ರೂ.10 ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರ-ಮಾಲಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರ ನೇತೃತ್ವದಲ್ಲಿ ಚಾಲಕರು ಪಂಪ್ ಎದುರು ಪ್ರತಿಭಟನೆ ನಡೆಸಿದರು.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಪಂಪ್ನ ಪ್ರಮುಖರು ಹಳೆಯ ದರವಾದ ರೂ.67.45ರಂತೆ ಗ್ಯಾಸ್ ನೀಡುವುದಾಗಿ ಒಪ್ಪಿಗೆ ನೀಡಿದರು.
ಇದಾದ ಬಳಿಕ ರಿಕ್ಷಾ ಚಾಲಕರು ಪ್ರತಿಭಟನೆಯನ್ನು ಹಿಂಪಡೆದು ಸ್ಥಳದಿಂದ ತೆರಳಿದರು. ಈ ವೇಳೆ ಕೆಲ ಸಮಯ ರಿಕ್ಷಾ ಚಾಲಕರು ಹಾಗೂ ಪಂಪ್ ಸಿಬ್ಬಂದಿಗಳ ನಡುವೆ ವಾಗ್ವಾದವೂ ನಡೆದಿದೆ.
ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ಶಾಂತಗೊಂಡಿತು