ಮಂಗಳೂರು ನಗರದ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿರುವ ರಾಮಕೃಷ್ಣ ಮಿಷನ್ ‘ಸ್ವಚ್ಛ ಮಂಗಳೂರು’ ಅಭಿಯಾನದ ಅಡಿಯಲ್ಲಿ ಧಾರ್ಮಿಕ ತ್ಯಾಜ್ಯಗಳ ಸಮರ್ಪಕ ಹಾಗೂ ಗೌರವಯುತ ವಿಲೇವಾರಿಗಾಗಿ ‘ವಿಸರ್ಜನೆ’ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಅಭಿಯಾನವು ಮಾರ್ಚ್ 16 ರಿಂದ 26 ರವರೆಗೆ ಮಂಗಳೂರಿನ ಆಯ್ದ ಆರು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ತಿಳಿಸಿದರು .
ನಗರದ ರಾಮಕೃಷ್ಣ ಮಠದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು ‘ವಿಸರ್ಜನೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹಳೆಯ ದೇವರ ಫೋಟೋಗಳು ಹಾಗೂ ಭಿನ್ನವಾದ ವಿಗ್ರಹಗಳು ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಗಮನಿಸಿದ ರಾಮಕೃಷ್ಣ ಮಿಷನ್ ಮತ್ತು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ವಯಂಸೇವಕರು, ಇವುಗಳ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾರೆ.
ನಗರದ ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಬಿಜೈ ಭಾರತ್ ಮಾಲ್, ಪಾಂಡೇಶ್ವರ ಫೋರಂ ಮಾಲ್, ಸಿಟಿ ಸೆಂಟರ್ ಮಾಲ್ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜು ಆವರಣಗಳಲ್ಲಿ ೧೦ ದಿನಗಳ ಕಾಲ ತಾತ್ಕಾಲಿಕ ಸಂಗ್ರಹಣಾ ಹುಂಡಿಗಳನ್ನು ಇರಿಸಲಾಗುವುದು. ಇದರ ಬೇಡಿಕೆ ಹೆಚ್ಚಾದರೆ ತಾತ್ಕಾಲಿಕ ಸಂಗ್ರಹಣಾ ಹುಂಡಿಗಳ ಸಂಖ್ಯೆಯನ್ನು ಮತ್ತು ನಗರದ ಇತರೆ ಭಾಗಗಳಲ್ಲಿ ಹುಂಡಿಗಳನ್ನು ಇಡಲಾಗುವುದು . ಅಗತ್ಯವಿದ್ದರೆ ನಗರದ ಶಾಶ್ವತ ಒಂದು ಕಡೆಯಲ್ಲಿ ಇದನ್ನು ಸ್ಥಾಪನೆ ಮಾಡಲಾಗುವುದು . ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಪ್ರೇಮ್ ಮಾಡಿದ ದೇವರ ಚಿತ್ರಗಳು, ಕ್ಯಾಲೆಂಡರ್ಗಳು ಹಾಗೂ ಭಿನ್ನವಾದ ಮೂರ್ತಿಗಳನ್ನು ಈ ಕೇಂದ್ರಗಳಿಗೆ ತಲುಪಿಸಬಹುದು ಎಂದರು .
ಸಂಗ್ರಹವಾದ ವಸ್ತುಗಳನ್ನು ಕದ್ರಿ ದೇವಸ್ಥಾನಕ್ಕೆ ಸಾಗಿಸಿ, ಅಲ್ಲಿ ಅರ್ಚಕರಿಂದ ವಿಶೇಷ ‘ಉದ್ವಾಸನ ಪೂಜೆ’ ನೆರವೇರಿಸಲಾಗುತ್ತದೆ. ನಂತರ ಸ್ವಯಂಸೇವಕರು ಇವುಗಳನ್ನು ವರ್ಗೀಕರಿಸಿ, ಕಾಗದದ ಚಿತ್ರಗಳನ್ನು ನೀರಿನಲ್ಲಿ ನಿಮಜ್ಜನ ಮಾಡಿ ತುಳಸಿ ಗಿಡಗಳನ್ನು ನೆಡಲಾಗುವುದು ಎಂದರು. ಮರ, ಗಾಜು ಹಾಗೂ ಲೋಹದ ವಸ್ತುಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸಲಾಗುತ್ತದೆ. ಮರುಬಳಕೆ ಸಾಧ್ಯವಿಲ್ಲದ ವಸ್ತುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸಿಮೆಂಟ್ ಕಾರ್ಖಾನೆಗಳಲ್ಲಿ ‘ಕೋ-ಪ್ರೊಸೆಸಿಂಗ್’ ಮೂಲಕ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುವುದು ಎಂದರು. ಈ ಯೋಜನೆಯನ್ನು ಉದಯ್ ಕೆ. ಪಿ. ಮತ್ತು ತಾರಾನಾಥ್ ಆಳ್ವ ಅವರು ಸಂಯೋಜಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ರಂಜನ್ ಬೆಳ್ಳಾರ್ಪಾಡಿ (8105356290) ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದರು .
ಧಾರ್ಮಿಕ ತ್ಯಾಜ್ಯವನ್ನು ಗೌರವಪೂರ್ವಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದ ಜೀ ,ಎಂ ಆರ್ ಪಿ ಎಲ್ ಸಿಎಸ್ ಆರ್ ಹಿರಿಯ ಅಧಿಕಾರಿ ಕೇಶವ್ ಪಾಟಾಳಿ