ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಯುವಕನೊಬ್ಬ ಸಂಪಾಜೆ ಸಮೀಪದ ಗೂನಡ್ಕದ ಲಾಡ್ಜ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತರನ್ನು ಪಾಣೆಮಂಗಳೂರು ಹೊರವಲಯದ ಬೊಂಡಾಲ ಶಾಂತಿಗುಡ್ಡೆ ನಿವಾಸಿ, ನಾರಾಯಣ ಕುಲಾಲ್ ಅವರ ಪುತ್ರ ತಿಲಕರಾಜ್ (28) ಎಂದು ಗುರುತಿಸಲಾಗಿದೆ.
ತಿಲಕರಾಜ್ ಅವರು ಮಾರ್ಚ್ 19ರಂದು ಅನಂತಾಡಿ ಪ್ರದೇಶದ ಮನೆಯೊಂದರಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಕ್ಕಾಗಿ ಅಗತ್ಯ ಸಾಮಗ್ರಿಗಳನ್ನು ಹಾಕಿ ಬಂದಿದ್ದರು. ಮಾರ್ಚ್ 20ರ ಸಂಜೆಯಿಂದ ಕುಟುಂಬದವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು.
ಇವರು ಕಲ್ಲಡ್ಕದಿಂದ ಮಡಿಕೇರಿ ರಸ್ತೆಯ ಮೂಲಕ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು, ಮಾರ್ಚ್ 20ರ ಸಂಜೆ ಸಂಪಾಜೆ ಸಮೀಪದ ಗೂನಡ್ಕದಲ್ಲಿ ಲಾಡ್ಜ್ನಲ್ಲಿ ಕೊಠಡಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಮಾರ್ಚ್ 21ರ ಬೆಳಗ್ಗೆ ಕೊಠಡಿಯ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು, ಸಮಾಜಸೇವಕ ತಾಜ್ ಟೀಲಿ ಅವರ ಸಹಕಾರದೊಂದಿಗೆ ಕಿಟಕಿ ಮೂಲಕ ಒಳ ಪ್ರವೇಶಿಸಿದಾಗ ತಿಲಕರಾಜ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಮೃತರಾಗಿರುವುದು ಪತ್ತೆಯಾಗಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.