ಕಾಸರಗೋಡು: ಅನಧಿಕೃತವಾಗಿ ನದಿ ಮರಳನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕ ಮತ್ತು ಮಾಲೀಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ನದಿ ತೀರ ಪ್ರದೇಶಗಳಲ್ಲಿ ಮರಳು ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕುಂಬಳ ಇನ್ಸ್ಪೆಕ್ಟರ್ ಬೈಜು ಕೆ ಜೋಸ್ ಅವರ ಸೂಚನೆಯಂತೆ ಎಸ್ಐಗಳಾದ ಕೆ ಸನಿತ್ ಹಾಗೂ ಅನಂತಕೃಷ್ಣನ್ ಆರ್ ಮೇನನ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಈ ವೇಳೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಚಾಲಕ ಮೊಯ್ತೀನ್ ಕುಂಜಿ (32) ಹಾಗೂ ಟಿಪ್ಪರ್ ಮಾಲೀಕ ಕಬೀರ್ (44) ಎಂದು ಗುರುತಿಸಲಾಗಿದೆ. ಚಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಟಿಪ್ಪರ್ ಮಾಲೀಕನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪುತ್ತಿಗೆ ನದಿಯ ಪಾಚಾಣಿ ಪ್ರದೇಶದಿಂದ ಟಿಪ್ಪರ್ನಲ್ಲಿ ಸಾಗಿಸಲಾಗುತ್ತಿದ್ದ ನದಿ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅತಿವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಪುತ್ತಿಗೆಯಲ್ಲಿ ಬಂಧಿಸಲಾಗಿದೆ.
ಇಬ್ಬರ ವಿರುದ್ಧವೂ ಸರ್ಕಾರದ ಆಸ್ತಿಯ ಕಳವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.