ಮಾಜಿ ಸಚಿವ ಹಾಗೂ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುವುದು ಹೊಸತೇನು ಅಲ್ಲ. ಆದರೆ ಬಂಟ್ವಾಳ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿರುವ ಹಕ್ಕು ಚ್ಯುತಿಯಿಂದ ನನಗೆ ನೋವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯಾ ಕ್ಷೇತ್ರದ ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತದೆ.ಪರಿಶಿಷ್ಟಕಾಲನಿಗಳಿಗೆ ಅನುದಾನ ತರಿಸಿರುವುದನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಗಲಾಟೆ ಮಾಡಿ ಹಕ್ಕುಚ್ಯುತಿ ಮಂಡಿಸಿರುವುದು ಸಂಕುಚಿತ ಮನೋಭಾವವಾಗಿದೆ ಎಂದರು. ಹಿಂದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಾಗುತ್ತಿರಲಿಲ್ಲ. ಈಗ ತಲಾ 10 ಕೋಟಿ ರು. ಶಾಸ ಕರಿಗೆ ಮಂಜೂರಾಗುತ್ತಿದೆ. ಶಾಸಕರು ತಮ್ಮ ವಿವೇಚನೆ ಮೇರೆಗೆ ಈ ಅನುದಾನದಲ್ಲಿ ಕಾಮಗಾರಿ ನಡೆಸಬಹುದು ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಶುಭೋದಯ ಆಳ್ವ, ಅಪ್ಪಿ, ದಿನೇಶ್ ಕುಮಾರ್, ಸುಹಾನ್ ಆಳ್ವ, ರಮಾನಂದ ಪೂಜಾರಿ, ರಿಯಾಝ್, ಅಶೋಕ್ ಡಿ.ಕೆ., ಪ್ರೇಮಾನಂದ ಬಳ್ಳಾಲ್ಬಾಗ್, ವಿಕಾಸ್ ಶೆಟ್ಟಿ ಇದ್ದರು