ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ದುಡಿಯುವ ವರ್ಗದ ಚಳುವಳಿಯ ವಿಸ್ತರಣೆಗಾಗಿ CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ಎಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಜರುಗಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ
ಕರ್ನಾಟಕ ರಾಜ್ಯಾದ್ಯಂತ ಆಯ್ದ 250ರಷ್ಟು ಪ್ರಮುಖ CITU ನಾಯಕರು ಭಾಗವಹಿಸಲಿರುವ ಸಂಘಟನಾ ಕಾರ್ಯಾಗಾರವನ್ನು CITU ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ ಎನ್ ಉಮೇಶ್ ರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ CITU ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂ,ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ,CITU ದ.ಕ.ಜಿಲ್ಲಾಧ್ಯಕ್ಷರಾದ ಬಿಎಂ ಭಟ್ ರವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ವಹಿಸಲಿದ್ದಾರೆ.
ಕಾರ್ಯಾಗಾರದ ಯಶಸ್ವಿಗಾಗಿ ಈಗಾಗಲೇ ಸುಮಾರು 200 ರಷ್ಟು ಮಂದಿಯ ಸ್ವಾಗತ ಸಮಿತಿ ರಚನೆಯಾಗಿದ್ದು ಅದರಡಿಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ.ದೇಶವನ್ನಾಳುವ ಕೇಂದ್ರ ಸರಕಾರವು ಕಾರ್ಪೊರೇಟ್ ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಮೇಲೆ ತೀವ್ರ ಧಾಳಿಗಳನ್ನು ನಡೆಸುತ್ತಿದೆ. ಕಾರ್ಮಿಕ ವರ್ಗದ ಪ್ರಮುಖ ಕಾನೂನುಗಳನ್ನು ಇಲ್ಲವಾಗಿಸಿದ ಆಳುವ ವರ್ಗದ ವಿರುದ್ಧ ಸಮರಶೀಲ ಹೋರಾಟ ಚಳುವಳಿಯನ್ನು ಕಟ್ಟುವ ಮೂಲಕ ದೇಶದ ಜನಸಾಮಾನ್ಯರ ಬದುಕಿಗೆ ರಕ್ಷಣೆ ನೀಡಬೇಕಾದ ಕಾರ್ಮಿಕ ವರ್ಗದ ಚಳುವಳಿವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಇಂತಹ ಮಹತ್ವದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಎಪ್ರಿಲ್ 4 ರಂದು ಬೆಳಿಗ್ಗೆ 10 ಗಂಟೆಗೆ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ಜರುಗಲಿದ್ದು, ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು, ಕಾರ್ಮಿಕ ವರ್ಗದ ನಾಯಕರು,ಪ್ರಗತಿಪರ ಚಿಂತಕರು, ಜೀವಪರ ಜನಪರ ಕಾಳಜಿಯುಳ್ಳ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.