ಉಡುಪಿ, ಏಪ್ರಿಲ್ 3: ಯಕ್ಷಗಾನ ರಂಗಸ್ಥಳದಲ್ಲಿ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಇದೀಗ ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಸೇವೆಯ ವೇಳೆ ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದ ಮಹಿಷಾಸುರ ಪಾತ್ರಧಾರಿ ರಂಗಮಂಟಪದಲ್ಲಿ ಅಬ್ಬರಿಸುವ ಸಂದರ್ಭದಲ್ಲಿ ಕಂಬಕ್ಕೆ ತಲೆಯನ್ನು ಜೋರಾಗಿ ಗುದ್ದಿಕೊಂಡ ಘಟನೆ ಪ್ರೇಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಕೆಲವರು ಕಲಾವಿದನ ತೀವ್ರ ಅಭಿವ್ಯಕ್ತಿಯನ್ನು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನೊಂದೆಡೆ, ಇಂತಹ ಅತಿರೇಕದ ವರ್ತನೆ ಕಲೆಗೆ ತಕ್ಕದ್ದಲ್ಲ, ಇದು ಮಿತಿ ಮೀರುವ ನಡೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಾವಿದರ ಭಾವನಾತ್ಮಕ ಅಭಿವ್ಯಕ್ತಿಗೆ ಮಿತಿ ಇರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಘಟನೆ ಯಕ್ಷಗಾನದಲ್ಲಿ ಅಭಿನಯದ ಮಿತಿಗಳು, ಸುರಕ್ಷತೆ ಮತ್ತು ಕಲಾತ್ಮಕತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.