ನೆರೆಯವರು, ಸಹೋದ್ಯೋಗಿಗಳು ಹಾಗೂ ತಮ್ಮ ಅಧೀನದಲ್ಲಿ ಕೆಲಸ ಮಾಡುವವರನ್ನು ನಿಸ್ವಾರ್ಥ ಭಾವನೆಯಿಂದ ಕಾಣಬೇಕು. ಎಲ್ಲಡೆ ಪ್ರೀತಿಯನ್ನು ಹಂಚುವ ಮೂಲಕ ದ್ವೇಷವನ್ನು ದೂರ ಮಾಡಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೊಸದಿಲ್ಲಿಯ ಮರ್ಕಝಿ ಜಮೀಯತೇ ಅಹ್ಲೆ ಹದೀಸ್ ಹಿಂದ್ ಅಧ್ಯಕ್ಷ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ ಹೇಳಿದರು.
ಜಮೀಯತೇ ಅಹ್ಲೆ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ‘ಕೆಡುಕು ಅಳಿಯಲಿ, ಒಳಿತು ಹರಡಲಿ’ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ರವಿವಾರ ನಡೆದ ಎರಡು ದಿನಗಳ ಅಹ್ಲೆ ಹದೀಸ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಧಾನ ಸಂದೇಶ ನೀಡಿದರು.
ಪ್ರತಿಯೊಬ್ಬರೊಡನೆ ಪ್ರೀತಿ ಮತ್ತು ವಿಶ್ವಾಸದಿಂದ ವ್ಯವಹರಿಸುವ ಮೂಲಕ ಸೌಹಾರ್ದತೆಯನ್ನು ವೃದ್ಧಿಸಬೇಕು. ಸಮಾಜದಲ್ಲಿ ಯಾವುದೇ ಕಾರಣಕ್ಕೂ ಸಂಘರ್ಷಗಳು ಉಂಟಾಗದಂತೆ ಗರಿಷ್ಠ ಮಟ್ಟದಲ್ಲಿ ಎಚ್ಚರಿಕೆ ವಹಿಸಿ, ಶಾಂತಿಯಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗೋವಾ ಘಟಕದ ಅಧ್ಯಕ್ಷ ಶೇಖ್ ಅಬ್ದುಲ್ ವಹ್ಹಾಬ್ ಜಾಮ, ಜಮೀಯತೇ ಅಹ್ಲೆ ಹದೀಸ್ ಕರ್ನಾಟಕ-ಗೋವಾ ಪ್ರಧಾನ ಕಾರ್ಯದರ್ಶಿ ಅಸ್ಲಮ್ ಖಾನ್ ಹಫಿಝಹುಲ್ಲಾಹ್ ಹಾಗೂ ಖಜಾಂಚಿ ಕೆ.ಜೆ. ಮನ್ಸೂರ್ ಅಹ್ಮದ್ ಖುರೈಷಿ ಹಫಿಝಹುಲ್ಲಾಹ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಶೇಖ್ ಅಬ್ದುಲ್ ಅಝೀಮ್ ಮದನಿ, ಶೇಖ್ ಮೆಅರಾಜ್ ರಬ್ಬಾನಿ ಮದನಿ, ಶೇಖ್ ಅಬ್ದುಸ್ಸಲಾಮ್ ಸಲಫಿ, ಶೇಖ್ ಅಬೂ ಉಮರ್ ಪರ್ವೇಝ್ ಮದನಿ, ಶೇಖ್ ಅಬ್ದುಲ್ ಹಸೀಬ್ ಮದನಿ, ಶೇಖ್ ಅಬೂ ರಿಝ್ವಾನ್ ಮುಹಮ್ಮದಿ, ಶೇಖ್ ಅಬೂ ಝೈದ್ ಝಮೀರ್, ಶೇಖ್ ಅಬ್ದುಲ್ ಖದೀರ್ ಉಮ್ರಿ, ಶೇಖ್ ಅಬ್ದುಲ್ ವಾರಿಸ್ ಮದನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.