ಮಂಗಳೂರು: ನಾಸಿಕ್ನ ಕಾರ್ಪೊರೇಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ‘ಕಾರ್ಪೊರೇಟ್ ಜಿಹಾದ್’ ಹಾಗೂ ಮತಾಂತರ ಪ್ರಕರಣಗಳು ಮತ್ತು ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಿರುವ ‘ಲವ್ ಜಿಹಾದ್’ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಮಂಗಳೂರು ಘಟಕದ ವತಿಯಿಂದ ಶುಕ್ರವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಮುಖ ಭಾಷಣ ಮಾಡಿದ ವಕೀಲ ಪೃಥ್ವೀಶ್ ಧರ್ಮಸ್ಥಳ ಮಾತನಾಡಿ, ದೇಶದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ನಡೆದಿದ್ದ ಮತಾಂತರ ಪ್ರಕ್ರಿಯೆ ಇದೀಗ ಬೇರೆಯ ರೂಪದಲ್ಲಿ ಮುಂದುವರಿಯುತ್ತಿದೆ ಎಂದು ಆರೋಪಿಸಿದರು. ಹಿಂದೆ ಕತ್ತಿ, ತೆರಿಗೆ ಮತ್ತು ಸುಲಿಗೆಗಳ ಮೂಲಕ ಮತಾಂತರ ನಡೆಸಲಾಗುತ್ತಿತ್ತು. ಈಗ ಏರ್ಕಂಡೀಷನ್ ಕಚೇರಿಗಳು, ಬ್ಯಾಂಕ್ಗಳು ಹಾಗೂ ಕಂಪನಿಗಳಲ್ಲಿ ವ್ಯವಸ್ಥಿತವಾಗಿ ಮತಾಂತರ ನಡೆಯುತ್ತಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರಮುಖರಾದ ಭುಜಂಗ ಕುಲಾಲ್, ಗೋಪಾಲ ಕುತ್ತಾರ್, ಪ್ರದೀಪ್ ಸರಿಪಳ್ಳ, ಶಿವಾನಂದ ಮೆಂಡನ್, ರವಿ ಅಸೈಗೋಳಿ, ನವೀನ್ ಮೂಡುಶೆಡ್ಡೆ, ಪುನೀತ್ ಅತ್ತಾವರ, ಸುಕನ್ಯಾ ರಾವ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ನೇತೃತ್ವ ವಹಿಸಿದರು.