ಸೊಗದ ಚೆಲುವ ಪ್ರಕೃತಿಯಲಿ
ಮೊಗ್ಗು ಅರಳಿದೆ ಸುಮವಾಗಿ
ಉದಯ ನೇಸರನ ಕಿರಣಗಳು
ಹೊಳೆವುದು ಹೊನ್ನ ಬೆಳಕಾಗಿ

ನವಿಲ ಸುಂದರ ನರ್ತನ ಕಂಡು
ತುಂಬಿದ ಮನವು ಪುಳಕವಾಗಿ
ಮಾಮರದಿ ಸ್ವರ ಕೋಗಿಲೆಯು
ಧ್ವನಿ ಗೂಡಿಸಿದೆ ಸುಶ್ರಾವ್ಯವಾಗಿ
ಮುಂಜಾನೆಯು ಇಬ್ಬನಿ ಸುರಿದು
ಮಂಜು ಕವಿದು ಧರೆ ಮಸುಕಾಗಿ
ನವ ದಿನವೊಂದು ಉದಯಿಸಿತು
ಬಾಳುವ ಸುಂದರ ಬದುಕಿಗಾಗಿ

ಕರ್ತವ್ಯ ಪಾಲನೆಯ ಕಾಯಕದಿ
ದಿನವೊಂದು ಕಳೆಯೇ ಕ್ಷಣವಾಗಿ
ಸುಖ ಸಂತೋಷವು ಜೊತೆಗಿರಲು
ಜಾರಿತು ಕಷ್ಟಗಳು ಕರಗಿ ನೀರಾಗಿ
ವರ್ಷಗಳು ಸಾಗಿ ಸರಿಯುತಿಹುದು
ದಿನದಗಳ ತೆರದಿ ಬಹಳ ವೇಗವಾಗಿ
ದೊರೆತ ಜೀವನ ಅಂತ್ಯಗೊಳುವುದು
ಪಡೆದಿಹ ಆಯುಷ್ಯವು ಕಡಿಮೆಯಾಗಿ

ಬರವಣಿಗೆ: ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ

