ಮಂಗಳೂರು: ಮಂಗಳೂರಿನ ಯುವಜನರ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸಲು ‘ಶ್ರೀ ಶಂಕರಾಚಾರ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಕಿಲ್ಸ್’ ವತಿಯಿಂದ ‘ಮಂಗಳೂರು ಇಂಟರ್ ಕಾಲೇಜ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಚಾಂಪಿಯನ್ಶಿಪ್–2026’ ಅನ್ನು ಮೇ 4ರಿಂದ 9ರವರೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಿಇಓ ಹಾಗೂ ನಿರ್ದೇಶಕ ಭವಿಷ್ ಸುವರ್ಣ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟವು ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಆಶಯ ಮತ್ತು ನೇತೃತ್ವದಲ್ಲಿ ನಡೆಯಲಿದೆ. ಮಂಗಳೂರಿನ ವಿದ್ಯಾರ್ಥಿಗಳಲ್ಲಿ ಅಪಾರ ಕ್ರೀಡಾ ಸಾಮರ್ಥ್ಯವಿದ್ದು, ಅವರಿಗೆ ಸೂಕ್ತ ವೇದಿಕೆ ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕ್ರೀಡಾಕೂಟವು ಯುಜಿ ವಿದ್ಯಾರ್ಥಿಗಳಿಗಾಗಿ ಮೇ 4ರಿಂದ 9ರವರೆಗೆ ನಡೆಯಲಿದ್ದು, ವಿವಿಧ ದಿನಗಳಲ್ಲಿ ವಿಭಿನ್ನ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮೇ 4ರಂದು ವಾಲಿಬಾಲ್, ಮೇ 5ರಂದು ಕಬಡ್ಡಿ, ಮೇ 7ರಂದು ಬ್ಯಾಡ್ಮಿಂಟನ್, ಮೇ 8ರಂದು ಟ್ರ್ಯಾಕ್ ಅಂಡ್ ಫೀಲ್ಡ್ ಹಾಗೂ ಹಗ್ಗಜಗ್ಗಾಟ ಮತ್ತು ಮೇ 9ರಂದು ಚೆಸ್ ಹಾಗೂ ಕ್ಯಾರಂ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.
ಆಸಕ್ತ ವಿದ್ಯಾರ್ಥಿಗಳು ಹಾಗೂ ಕಾಲೇಜು ತಂಡಗಳು ssccmangalore.co.in ವೆಬ್ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಋತುಪರ್ಣ ಕೆ.ಎಸ್., ಶ್ರೇಯಸ್ ಆಚಾರ್ಯ, ದಿಶಾ ಕೋಟ್ಯಾನ್ ಮತ್ತು ಭಾಗ್ಯಶ್ರೀ ಉಪಸ್ಥಿತರಿದ್ದರು.