ಮಂಗಳೂರು: 8 ಗಂಟೆಯ ದುಡಿಮೆ,8 ಗಂಟೆಯ ನಿದ್ರೆ,8 ಗಂಟೆಯ ವಿಶ್ರಾಂತಿಗಾಗಿ ಮೂಡಿ ಬಂದಿರುವ ಮೇ ದಿನಾಚರಣೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಜಗತ್ತಿನಾದ್ಯಂತ ಮಾನವ ಜನಕೋಟಿಗಳು ಒಂದಾಗಿ ಆಚರಿಸುವ ಏಕೈಕ ದಿನವಾಗಿದೆ ಮೇ ದಿನ.ಅಂತಹ ಮೇ ದಿನದ ಆಶಯವನ್ನು ಬುಡಮೇಲುಗೊಳಿಸಿ ದಿನದ ದುಡಿಮೆಯನ್ನು 12 ಗಂಟೆಗೆ ಏರಿಸುವ ಮೂಲಕ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಸರಕಾರದ ವಿರುದ್ಧ ಸಮರಶೀಲ ಹೋರಾಟವನ್ನು ನಡೆಸಲು ಕಾರ್ಮಿಕ ವರ್ಗ ಸಜ್ಜಾಗಬೇಕೆಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕರೆ ನೀಡಿದರು.
ಅವರು ಮೇ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿ ಜರುಗಿದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.ಎಲ್ಲಾ ವಿಭಾಗದ ಕಾರ್ಮಿಕರು,ನೌಕರರು ಹಾಗೂ ಜನಪರ ಸಂಘಟನೆಗಳು ಸೇರಿ ರಚಿಸಿಕೊಂಡ ಮೇ ದಿನ ಆಚರಣಾ ಸಮಿತಿಯ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆಯ ಪ್ರಾರಂಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಿಂದ ಕಾರ್ಮಿಕರ ಆಕರ್ಷಕ ಮೆರವಣಿಗೆ ನಡೆದು ಕೇಂದ್ರ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.
ಮುಂದುವರಿಸುತ್ತಾ ಅವರು, ಬಂಡವಾಳಶಾಹಿ ವ್ಯವಸ್ಥೆಯ ಮುಂದುವರಿದ ಭಾಗವೇ ಸಾಮ್ರಾಜ್ಯಶಾಹಿ ವ್ಯವಸ್ಥೆಯಾಗಿದ್ದು,ಇಂದು ಇಡೀ ಜಗತ್ತನ್ನು ನಿಯಂತ್ರಿಸಲು ಹೊರಟಿದೆ.ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿಗಳು ಜನಸಾಮಾನ್ಯರನ್ನು ಕಾರ್ಮಿಕ ವರ್ಗವನ್ನು ಘೋರವಾಗಿ ಕಾಡುತ್ತಿದೆ.ಜಗತ್ತಿನೆಲ್ಲೆಡೆ ಕವಿದ ಯುದ್ಧದ ಕಾರ್ಮೋಡಗಳಿಂದ ವಿಪರೀತ ಬೆಲೆಯೇರಿಕೆಯಾಗಿದ್ದು ಕಾರ್ಮಿಕರ ಬದುಕು ತೀವ್ರ ಸಂಕಷ್ಟಕ್ಕೊಳ್ಳಗಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷರೂ,ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿಯವರು ಮಾತನಾಡಿ, ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಬದುಕನ್ನು ಉತ್ತಮಗೊಳಿಸದೆ ಸಮಾಜದ ಅಭಿವೃದ್ಧಿಯಾಗಲೀ, ದೇಶದ ಉದ್ದಾರವಾಗಲೀ ಸಾಧ್ಯವಿಲ್ಲ. ಅದರೆ ಜಗತ್ತಿನೆಲ್ಲೆಡೆ ಸಮಾಜವಾದಿ ರಾಷ್ಟ್ರಗಳನ್ನು ಬಿಟ್ಟರೆ ಉಳಿದ ಎಲ್ಲಾ ದೇಶಗಳು ಅಲ್ಲಿನ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಬೊಗಳೆ ಬಿಟ್ಟ ನರೇಂದ್ರ ಮೋದಿ ಸರಕಾರ ಹೆಜ್ಜೆಹೆಜ್ಜೆಗೂ ದೇಶದ ಕಾರ್ಮಿಕ ವರ್ಗದ ಬದುಕನ್ನು ಸರ್ವನಾಶ ಮಾಡಿದೆಯೇ ಹೊರತು ದೇಶದ ಜನತೆಗಾಗಿ ಏನೂ ಮಾಡಿಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದರು.
ಸಭೆಯನ್ನುದ್ದೇಶಿಸಿ ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಮುಖಂಡರಾದ ಸುನಿಲ್ ರಾಜ್ ರವರು ಮಾತನಾಡಿ,ಮೇ ದಿನದ ಮಹತ್ವವನ್ನು ಹಾಗೂ ಮುಂಬರುವ ದಿನಗಳಲ್ಲಿ ಕಾರ್ಮಿಕ ವರ್ಗದ ಸವಾಲುಗಳನ್ನು ಎಳೆಎಳೆಯಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ SSLC ಹಾಗೂ PUC ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿವಿಧ ವಿಭಾಗದ ಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ CITU ಜಿಲ್ಲಾ ನಾಯಕರಾದ ಬಿ ಕೆ ಇಮ್ತಿಯಾಜ್,ಶಶಿಧರ್ ಶಕ್ತಿನಗರ, ಜಯಂತಿ ಶೆಟ್ಟಿ,ಭಾರತಿ ಬೋಳಾರ,ಲೋಕೇಶ್ ಎಂ, ಸಂತೋಷ್ ಆರ್ ಎಸ್, ಮುಝಾಫರ್ ಅಹಮದ್,DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಕರಿಯ ಕೆ,ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ ಉಪಸ್ಥಿತರಿದ್ದರು.