ಕಾಸರಗೋಡು: ಸಪ್ತ ಭಾಷಾ ಸಂಗಮ ನೆಲೆ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಉಬ್ರಂಗಳ ಗ್ರಾಮದಲ್ಲಿ ನೆಲೆಯಾದ 2000 ವರ್ಷಗಳ ಇತಿಹಾಸವಿರುವ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರವು ‘ಬಡಗು ಶಬರಿಮಲೆ’ಯೆಂದೇ ಇತಿಹಾಸ ಪ್ರಸಿದ್ಧವಾಗಿದೆ. ಶ್ರೀ ಕ್ಷೇತ್ರದಲ್ಲಿ ಮೇ 11ರಂದು 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಸಂಜೆ ಗಂಟೆ 5 ರಿಂದ ನಡೆಯಲಿದೆ ಎಂದು ಶ್ರೀಕ್ಷೇತ್ರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಕುಣಿಕುಳ್ಳಾಯ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಮಹತ್ ಕಾರ್ಯದಲ್ಲಿ ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಈ ಪುಣ್ಯಕಾರ್ಯದ ಉದ್ಘಾಟನೆಗೈದು ಆಶೀರ್ವಚನ ನೀಡಲಿರುವರು .
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ (ಶ್ರೀ ಕ್ಷೇತ್ರದ ತಂತ್ರಿಗಳು), ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ (ಶ್ರೀ ಕ್ಷೇತ್ರದ ಗೌರವ ಸಲಹೆಗಾರರು), ನಾರಾಯಣ ವರ್ಮ ಪಂದಳು ಕೊಟ್ಟಾರಂ, ಶಬರಿಮಲೆ, ಕೆ. ಸಿ. ನಾಗೇಂದ್ರ ಭಾರದ್ವಾಜ್, ಸುರತ್ಕಲ್ ಶ್ರೀ ಕ್ಷೇತ್ರದ ದೈವಜ್ಞರು) ಶ್ರೀ ರಾಮ ಗುರುಸ್ವಾಮಿ ಉದಯಗಿರಿ (ಹಿರಿಯ ಗುರು ಸ್ವಾಮಿಗಳು), ಶ್ರೀಮತಿ ತಾಳಿಪಾಡಿ ಜಾಹ್ನವಿ ಶಾಸ್ತ್ರಿ, ಬೆಂಗಳೂರು (ದಾನಿಗಳು) ಜಗದೀಶ್ ಎಸ್. (ತಾಂತ್ರಿಕ ನಿರ್ದೇಶಕರು, ಹೆಸ್ಕಾಂ, ಧಾರವಾಡ). ಡಾ|| ಕಿಶೋರ್ ಕುಮಾರ್ ಕುಣಿಕುಳ್ಳಾಯ (ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರು ) ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಪ್ರಮುಖರಾದ ಮಧುಸೂದನ ಆಯರ್ ಮಂಗಳೂರು , ಪ್ರಶಾಂತ್ ಕುಣಿಕುಳ್ಳಾಯ, ಉಬ್ರಂಗಳ , ರಾಜೇಶ್ ಮಾಸ್ಟರ್ ಅಗಲ್ಪಾಡಿ , ಗೋವಿಂದರಾಜ್ ಮೈಲ್ತೊಟ್ಟಿ ಉಪಸ್ಥಿತರಿದ್ದರು .