ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್; ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ

ವಿಮೆನ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಮ್ ಅವರು ಕರ್ನಾಟಕ ರಾಜ್ಯ ಸರ್ಕಾರವು ಹಿಜಾಬ್ ನಿಷೇಧವನ್ನು ಹಿಂಪಡೆಯಲು ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಕ್ರಮವು ವಿದ್ಯಾರ್ಥಿನಿಯರ ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನಿಕ ಹಕ್ಕುಗಳನ್ನು ಗೌರವಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ಈ ನಿರ್ಧಾರವು ಜನಪರ ಹೋರಾಟ ಹಾಗೂ ನಿರಂತರ ಕಾನೂನು ಹೋರಾಟದ ಜಯವಾಗಿದೆ ಎಂದು ಅವರು ವಿವರಿಸಿದರು .

ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಿಜಾಬ್ ನಿಷೇಧವನ್ನು ಹಿಂಪಡೆಯುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು, ಮೂರು ವರ್ಷಗಳ ಕಾಲ ಮಹಿಳಾ ಶಿಕ್ಷಣದ ಬಗ್ಗೆ ಕಿವಿಗೊಡಲಿಲ್ಲ. ವಿಳಂಬವಾದರೂ ಈಗ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹವಾಗಿದೆ.
ಹಿಜಾಬ್ ನಿಷೇಧದ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾದರು. ಈ ನಿಷೇಧದ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರವಾದ ಮತ್ತು ನಿರಂತರ ಹೋರಾಟ ನಡೆಸಿತ್ತು.


ಆದರೆ ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ, ಹಿಂದಿನ ಸರ್ಕಾರ ಹೊರಡಿಸಿದ ಹಿಜಾಬ್ ನಿಷೇಧ ಆದೇಶವನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲು ಅಗತ್ಯ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಸರ್ಕಾರವನ್ನು ಮನವಿ ಮಾಡಿದೆ.

ಹಿಜಾಬ್ ಧರಿಸುವುದು ಮಹಿಳೆಯರ ಸಂವಿಧಾನಿಕ, ಧಾರ್ಮಿಕ ಮತ್ತು ವೈಯಕ್ತಿಕ ಹಕ್ಕಿನ ಭಾಗವಾಗಿದ್ದು, ಈ ಕಾರಣದಿಂದ ಯಾವುದೇ ವಿದ್ಯಾರ್ಥಿನಿಯರಿಗೆ ಶಿಕ್ಷಣದಲ್ಲಿ ಅಡ್ಡಿಯಾಗಬಾರದು ಎಂದು ಅವರು ಒತ್ತಿಹೇಳಿದರು. ಶಿಕ್ಷಣ ಮತ್ತು ಹಕ್ಕುಗಳ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಸರ್ಕಾರವು ಸ್ಪಷ್ಟ ಮತ್ತು ಶೀಘ್ರ ಕ್ರಮಗಳನ್ನು ಕೈಗೊಂಡು, ವಿದ್ಯಾರ್ಥಿನಿಯರ ಹಕ್ಕುಗಳು ಮತ್ತು ಗೌರವವನ್ನು ಸಂಪೂರ್ಣವಾಗಿ ಕಾಪಾಡಬೇಕು ಎಂದು ಶಾಹಿದಾ ತಸ್ನೀಮ್ ಅವರು ಸರ್ಕಾರವನ್ನು ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!