ಮಂಜೇಶ್ವರ : ನೂತನವಾಗಿ ಕಾಮಗಾರಿ ಪೂರ್ಣಗೊಂಡ ಷಟ್ಪಥ ರಸ್ತೆಯ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿರುವ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕೆಲಸದ ವೈಖರಿಯಿಂದಾಗಿ ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಮತ್ತೊಮ್ಮೆ ಆತಂಕದ ದಿನಗಳನ್ನು ಎದುರಿಸುತ್ತಿದ್ದಾರೆ. ಮಳೆಗಾಲದ ಆರಂಭದಲ್ಲೇ ಸುರಿಯುತ್ತಿರುವ ಮಳೆಗೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಪೊಸೋಟು ಮಲ್ಹರ್ ವಿದ್ಯಾಸಂಸ್ಥೆ ಮತ್ತು ಪರಿಸರದ ಮನೆಗಳು ಜಲಾವೃತವಾಗುವ ಭೀತಿಯಲ್ಲಿವೆ.
ಪ್ರಮುಖ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ‘ಯುಲ್ ಸಿಸಿ’ ಕಂಪನಿಯು ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಾದ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿಲ್ಲ. ಈ ಕಾರಣದಿಂದಾಗಿ, ರಸ್ತೆಯ ಮೇಲೆ ಸಂಗ್ರಹವಾಗುವ ದೊಡ್ಡ ಪ್ರಮಾಣದ ಮಳೆ ನೀರು ನೇರವಾಗಿ ಶಾಲೆ ಮತ್ತು ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ.
ಈ ಪ್ರದೇಶವು ಕಳೆದ ಮಳೆಗಾಲದಲ್ಲೂ ಸಂಪೂರ್ಣವಾಗಿ ಜಲಾವೃತಗೊಂಡು ಅಪಾರ ನಷ್ಟ ಅನುಭವಿಸಿತ್ತು. ಆಗಲೇ ಸ್ಥಳೀಯರು ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಈವರೆಗೆ ಯಾವುದೇ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ. ಇದೀಗ ಮೊದಲ ಮನ್ಸೂನ್ ಮಳೆಯೇ ಆತಂಕವನ್ನು ಹೆಚ್ಚಿಸಿದ್ದು, ಕಳೆದೆ ಬಾರಿಯಂತೆ ಈ ಬಾರಿಯೂ ಅನಾಹುತ ಸಂಭವಿಸುವ ಮುನ್ಸೂಚನೆ ಕಾಣಿಸುತ್ತಿದೆ.
“ಮಕ್ಕಳು ವಿದ್ಯಾಭ್ಯಾಸ ಮಾಡುವ ವಿದ್ಯಾಸಂಸ್ಥೆ ಮತ್ತು ಜನವಸತಿ ಪ್ರದೇಶಗಳ ಸುರಕ್ಷತೆಯನ್ನು ಕಡೆಗಣಿಸುವುದು ಅಕ್ಷಮ್ಯ. ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮುನ್ನವೇ ಗುತ್ತಿಗೆದಾರ ಕಂಪನಿ ಮತ್ತು ಸಂಬಂಧಪಟ್ಟ ಆಡಳಿತ ಮಂಡಳಿಗಳು ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ನೀರು ಸರಾಗವಾಗಿ ಹರಿಯುವಂತೆ ವೈಜ್ಞಾನಿಕ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು” ಎಂದು ಸ್ಥಳೀಯ ನಿವಾಸಿಗಳು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಆಗ್ರಹಿಸಿದೆ.
ಕೂಡಲೇ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ