ಹೊಂಡಮಯ ರಸ್ತೆಗೆ ಸ್ಥಳೀಯರಿಂದ ಶ್ರಮದಾನ; ಮಣ್ಣು-ಜಲ್ಲಿ ತುಂಬಿಸಿ ಸಂಚಾರಕ್ಕೆ ಅನುಕೂಲ

ಕಡಬ: ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ಸಂಪರ್ಕ ರಸ್ತೆಯಲ್ಲಿನ ಹೊಂಡಗಳನ್ನು ಸ್ಥಳೀಯರು ಶ್ರಮದಾನದ ಮೂಲಕ ಮುಚ್ಚಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವ ಘಟನೆ ಭಾನುವಾರ ನಡೆದಿದೆ.

ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್‌ವರೆಗೆ ಸುಮಾರು 2.5 ಕಿ.ಮೀ. ರಸ್ತೆ ಸಂಪೂರ್ಣ ಹೊಂಡಮಯಗೊಂಡು ವಾಹನ ಸಂಚಾರಕ್ಕೆ ಅಸಮರ್ಪಕವಾಗಿತ್ತು. ಈ ಹಿನ್ನೆಲೆಯಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಅವರ ನೇತೃತ್ವದಲ್ಲಿ ವಾಟ್ಸ್ಆ್ಯಪ್‌ ಗುಂಪು ರಚಿಸಿ ರಸ್ತೆ ದುರಸ್ತಿಗೆ ಸಾರ್ವಜನಿಕರಿಂದ ಆರ್ಥಿಕ ನೆರವು ಸಂಗ್ರಹಿಸಲಾಯಿತು. ಹಲವು ದಾನಿಗಳು ಹಣ ಹಾಗೂ ಇತರ ರೂಪದಲ್ಲಿ ಸಹಾಯ ನೀಡಿದರು.

ಕಳೆದ ಬುಧವಾರದಿಂದ ಯಂತ್ರಗಳ ಮೂಲಕ ರಸ್ತೆ ಬದಿಯ ಪೊದೆ-ಮರಗಳ ತೆರವು ಹಾಗೂ ಚರಂಡಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಭಾನುವಾರ ಸ್ಥಳೀಯರು ಶ್ರಮದಾನದ ಮೂಲಕ ಹೊಂಡಗಳಿಗೆ ಮಣ್ಣು ಮತ್ತು ಜಲ್ಲಿ ತುಂಬಿಸಿ ರಸ್ತೆ ದುರಸ್ತಿ ನಡೆಸಿದರು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯದಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡರು.

ಈ ರಸ್ತೆ ಗೋಳಿತ್ತಡಿ, ಏಣಿತ್ತಡ್ಕ, ಕುದುಲೂರು, ಸಬಳೂರು, ಕಕ್ವೆ, ಪರಂಗಾಜೆ, ಕೊಲ್ಯ ಹಾಗೂ ಸಂಕೇಶ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದಶಕಗಳಿಂದ ರಸ್ತೆ ತಾತ್ಕಾಲಿಕ ತೇಪೆ ಕಾಮಗಾರಿಗೆ ಮಾತ್ರ ಸೀಮಿತವಾಗಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಹೊಂಡಗಳು ನಿರ್ಮಾಣವಾಗುತ್ತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಗೆ ಎಂಟು ವರ್ಷಗಳ ಹಿಂದೆ ನಾಬಾರ್ಡ್ ಯೋಜನೆಯಡಿ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ ತೇಪೆ ಕಾಮಗಾರಿಗಳು ನಡೆದಿದ್ದರೂ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿಲ್ಲ. ಕಳೆದ ವರ್ಷವೂ ಸುಮಾರು 9.13 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ನಡೆಸಲಾಗಿದ್ದರೂ ರಸ್ತೆ ಮತ್ತೆ ಹೊಂಡಮಯಗೊಂಡಿದೆ.

ಈ ಮಧ್ಯೆ, ಗೋಳಿತ್ತಡಿಯಿಂದ ಸುಮಾರು 800 ಮೀಟರ್ ರಸ್ತೆ ಡಾಂಬರೀಕರಣಕ್ಕೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು 40 ಲಕ್ಷ ರೂ. ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಕಾರ್ಯಪಾಲಕ ಸಹಾಯಕ ಎಂಜಿನಿಯರ್ ಭರತ್ ಬಿ.ಎಂ., ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಇದೀಗ ಡಾಂಬರು ಲಭ್ಯವಿದ್ದರೂ ಮಳೆಗಾಲದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಮಳೆಯ ತೀವ್ರತೆ ಕಡಿಮೆಯಾದ ಬಳಿಕ ರಸ್ತೆ ಡಾಂಬರೀಕರಣ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯರ ಸಹಕಾರದಿಂದ ರಸ್ತೆ ಹೊಂಡ ಮುಚ್ಚುವ ಹಾಗೂ ರಸ್ತೆ ಬದಿಯ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಂಪೂರ್ಣ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!