ರಾಮ ಮಂದಿರ ದೇಣಿಗೆ ವಿವಾದಕ್ಕೆ ಹೊಸ ತಿರುವು: 1,250 ಅಮೂಲ್ಯ ಇಟ್ಟಿಗೆಗಳು ನಾಪತ್ತೆ ಆರೋಪ

ಅಯೋಧ್ಯೆ, ಅಯೋಧ್ಯೆಯ ರಾಮ ಮಂದಿರ ದೇಣಿಗೆ ನಿರ್ವಹಣೆ ಕುರಿತ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ರಾಮ ಜನ್ಮಭೂಮಿ ಚಳವಳಿಯ ಕಾರ್ಯಕರ್ತ ಸಂತೋಷ್ ದುಬೆ ಅವರು ಸುಮಾರು 1,250 ಚಿನ್ನ, ಬೆಳ್ಳಿ, ವಜ್ರ ಹಾಗೂ ಅಷ್ಟಧಾತುವಿನಿಂದ ತಯಾರಿಸಲಾದ ಅಮೂಲ್ಯ ಇಟ್ಟಿಗೆಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, ದೇವಾಲಯದ ಆಡಳಿತಾಧಿಕಾರಿ ಗೋಪಾಲ್ ರಾವ್ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ದುಬೆ ಆಗ್ರಹಿಸಿದ್ದಾರೆ.

ಮಂಗಳವಾರ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ದೇಶ-ವಿದೇಶಗಳ ಭಕ್ತರು ದೇಣಿಗೆಯಾಗಿ ನೀಡಿದ್ದ ಅಮೂಲ್ಯ ಇಟ್ಟಿಗೆಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿದೆ.

ಮಾರಿಷಸ್‌ನಿಂದ ಕಳುಹಿಸಲಾಗಿದ್ದ ವಿಶೇಷ ಇಟ್ಟಿಗೆ ಹಾಗೂ ಮುಂಬೈ ಮೂಲದ ಉದ್ಯಮಿಯೊಬ್ಬರು ವಜ್ರಗಳಿಂದ ಅಲಂಕರಿಸಿ ದಾನ ಮಾಡಿದ್ದ ಇಟ್ಟಿಗೆಯೂ ನಾಪತ್ತೆಯಾಗಿರುವ ವಸ್ತುಗಳಲ್ಲಿ ಸೇರಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ದಿವಂಗತ ಅಶೋಕ್ ಸಿಂಘಾಲ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರು ಮತ್ತು ಕರಸೇವಕರಿಗೆ ಇಟ್ಟಿಗೆಗಳನ್ನು ದಾನ ಮಾಡುವಂತೆ ಕರೆ ನೀಡಿದ್ದರು. ಅದರಂತೆ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಲೋಹಗಳಿಂದ ತಯಾರಿಸಲಾದ ಇಟ್ಟಿಗೆಗಳನ್ನು ಭಕ್ತರು ದೇಣಿಗೆಯಾಗಿ ನೀಡಿದ್ದರು. ಕೆಲವು ಇಟ್ಟಿಗೆಗಳು ವಜ್ರಗಳು ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದವು ಎಂದು ದುಬೆ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಅಮೂಲ್ಯ ಇಟ್ಟಿಗೆಗಳು ಕಾಣೆಯಾಗಿದ್ದು, ಅವುಗಳಿರುವ ಸ್ಥಳದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ, ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಖರೀದಿ ವ್ಯವಹಾರಗಳ ಬಗ್ಗೆಯೂ ಈ ಹಿಂದೆ ಪ್ರಶ್ನೆಗಳು ಉದ್ಭವಿಸಿದ್ದವು ಎಂದು ಉಲ್ಲೇಖಿಸಿರುವ ದುಬೆ, ಟ್ರಸ್ಟ್‌ಗೆ ಸಂಬಂಧಿಸಿದ ಕೆಲವರ ಆಸ್ತಿ-ಪಾಸ್ತಿಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಒಮ್ಮೆ ಚಾಲಕರಾಗಿದ್ದ ವ್ಯಕ್ತಿಯೊಬ್ಬರು ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳ ಮಾಲೀಕರಾಗಿದ್ದಾರೆ ಎಂಬ ವರದಿಗಳಿವೆ ಎಂದು ಟಿನ್ನು ಯಾದವ್ ಅವರನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ.

ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ, ಚಂಪತ್ ರಾಯ್ ಅವರು ಅಸ್ವಸ್ಥರಾಗಿರುವ ಕಾರಣ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ. ಅನಿಲ್ ಮಿಶ್ರಾ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಹೊರಗಿದ್ದು, ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ಇನ್ನೊಂದೆಡೆ, ದೇಣಿಗೆ ಕಳ್ಳತನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ರಾಮ ಮಂದಿರದಲ್ಲಿ ದೇಣಿಗೆ ಸಂಗ್ರಹಣೆ, ಎಣಿಕೆ, ಪ್ಯಾಕಿಂಗ್ ಹಾಗೂ ಬ್ಯಾಂಕ್‌ಗೆ ಠೇವಣಿ ಮಾಡುವ ಪ್ರಕ್ರಿಯೆಯನ್ನು ಸುಮಾರು ಆರು ಗಂಟೆಗಳ ಕಾಲ ಪರಿಶೀಲಿಸಿತು.

ತನಿಖಾ ತಂಡವು ದಾಖಲೆಗಳು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಿದ್ದು, ಟ್ರಸ್ಟ್ ಸಿಬ್ಬಂದಿ, ನಗದು ಎಣಿಕೆ ಸಿಬ್ಬಂದಿ ಹಾಗೂ ದೇಣಿಗೆ ನಿರ್ವಹಣೆಯಲ್ಲಿ ತೊಡಗಿರುವ ಇತರರನ್ನು ವಿಚಾರಣೆ ನಡೆಸುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!