ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ಜನಸಂಘ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಸಂಸ್ಮರಣಾ ಕಾರ್ಯಕ್ರಮವು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಿತು.
ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಅವರನ್ನು ಕೇವಲ ಜನಸಂಘದ ಸಂಸ್ಥಾಪಕರು ಎಂಬ ಕಾರಣಕ್ಕೆ ಸ್ಮರಿಸುವುದು ಅಲ್ಲ. ಬದಲಿಗೆ ಭಾರತದ ಏಕತೆಯ ರಕ್ಷಣೆ, ಬಂಗಾಳ ಹಾಗೂ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಉಳಿಸುವುದು ಸೇರಿದಂತೆ ರಾಷ್ಟ್ರಪರ ಅನೇಕ ಹೋರಾಟಕ್ಕೆ ಸರ್ವಸ್ವವನ್ನು ಅರ್ಪಿಸಿದ ಮಹಾನ್ ವ್ಯಕ್ತಿ. ಅವರ ಬಲಿದಾನಕ್ಕೆ ಕಾರಣವಾದ ಜಮ್ಮು ಕಾಶ್ಮೀರದ 370 ವಿಧಿಯನ್ನು ನರೇಂದ್ರ ಮೋದಿ ಸರ್ಕಾರವು ಕಿತ್ತೆಸೆದು ಮುಖರ್ಜಿ ಅವರ ಕನಸು ನನಸು ಮಾಡಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರ ನಿರ್ಮಾಣದಲ್ಲಿ ಅವರು ತೋರಿದ ಹಾದಿ, ಹಾಕಿಕೊಟ್ಟ ಆದರ್ಶಗಳು ನಮ್ಮಂತಹ ಪ್ರತಿಯೊಬ್ಬ ಕಾರ್ಯಕರ್ತನಿಗೂ ದಾರಿ ದೀಪ ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಹಾಗೂ ಲಲೇಶ್ ಕುಮಾರ್, ಮಂಡಲದ ಎಸ್ಐಆರ್ ಪ್ರಭಾರಿ ಹಾಗೂ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸುಧೀರ್ ಶೆಟ್ಟಿ ಕಣ್ಣೂರು, ನಿಕಟಪೂರ್ವ ಪಾಲಿಕೆ ಸದಸ್ಯರುಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು, ವಿವಿಧ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.