ಮಂಗಳೂರು: ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ 3181ರ 2026–27ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ರೊ. ಸತೀಶ್ ಬೋಳಾರ್ ಅವರು ಜೂನ್ 28ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಪಿಲಿಕುಳ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಗವರ್ನರ್ (ನಿಯೋಜಿತ) ರೊ. ಸತೀಶ್ ಬೋಳಾರ್, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿರುವ ರೋಟರಿ ಜಿಲ್ಲಾ 3181ರ ಸುಮಾರು 1,000ಕ್ಕೂ ಅಧಿಕ ರೋಟೇರಿಯನ್ಗಳು, ರೋಟರಾಕ್ಟರ್ಗಳು, ಇಂಟರಾಕ್ಟರ್ಗಳು, ಗಣ್ಯರು ಹಾಗೂ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಫೌಂಡೇಶನ್ ಟ್ರಸ್ಟಿ ಹಾಗೂ ಮಾಜಿ ರೋಟರಿ ಇಂಟರ್ನ್ಯಾಷನಲ್ ನಿರ್ದೇಶಕರಾದ ರೊ. ಡಾ. ಭರತ್ ಪಾಂಡ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರಸ್ತುತ ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ. ಸೇರಿದಂತೆ ರೋಟರಿಯ ವಿವಿಧ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ರೋಟರಿಯ ನಿಜವಾದ ಶಕ್ತಿ ಅದರ ಸದಸ್ಯರ ಸೇವಾ ಮನೋಭಾವದಲ್ಲಿದೆ. ಜಿಲ್ಲೆಯ ಎಲ್ಲ ರೋಟರಿ ಕ್ಲಬ್ಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸಮಾಜದ ವಿವಿಧ ಸಂಘಟನೆಗಳೊಂದಿಗೆ ಕೈಜೋಡಿಸಿ ಅರ್ಥಪೂರ್ಣ ಹಾಗೂ ಶಾಶ್ವತ ಪರಿಣಾಮ ಬೀರುವ ಸೇವಾ ಯೋಜನೆಗಳನ್ನು ಜಾರಿಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ರೊ. ಸತೀಶ್ ಬೋಳಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ 3181ರ ಪದಾಧಿಕಾರಿಗಳಾದ ರೊ. ವಿಕ್ರಮದತ್ತ, ರೊ. ಜಿ.ಕೆ. ಶೆಟ್ಟಿ ಹಾಗೂ ರೊ. ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.