ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಸಂಘದ ವತಿಯಿಂದ ದಿ. ಮಂದರ್ಕೆ ಮಾಧವ್ ಪೈ ಸ್ಮರಣಾರ್ಥ ‘ಸೋಬಿತ್ ಪಾನ್ಸಾಡಿ’ ಕೊಂಕಣಿ ಸಾಹಿತ್ಯ ಹಾಗೂ ವಿವಿಧ ಸ್ಪರ್ಧೆಗಳು ಜುಲೈ 12ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಗರದ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿವೆ.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಎ. ರಮೇಶ್ ಪೈ, ಕೊಂಕಣಿ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡುವ ಹಾಗೂ ವಿವಿಧ ವಯೋಮಾನದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರವೀಂದ್ರ ಪೈ ಹಾಗೂ ಸುರೇಂದ್ರ ಪೈ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಬಣ್ಣ ತುಂಬುವ, ಚಿತ್ರಕಲೆ, ಕವನ ವಾಚನ, ಭಾಷಣ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆಯಲಿದ್ದು, ಎಲ್ಲ ಸ್ಪರ್ಧೆಗಳೂ ಮಳೆಗಾಲದ ವಿಷಯಾಧಾರಿತವಾಗಿರಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಆರ್. ಕಾಮತ್, ಮುಖ್ಯ ಸಂಚಾಲಕ ವೆಂಕಟೇಶ್ ಎನ್. ಬಾಳಿಗ, ಸಂಘದ ಸದಸ್ಯರಾದ ಸುಚಿತ್ರಾ ಶೆಣೈ, ಮೋಹನ್ದಾಸ್ ಪೈ, ಮಂಗಳಾ ಭಟ್ ಹಾಗೂ ಎಂ.ಎಸ್. ಪ್ರಭು ಉಪಸ್ಥಿತರಿದ್ದರು


