ಮಂಜೇಶ್ವರ: ಕೇರಳ ರಾಜ್ಯವು ಅಭಿವೃದ್ಧಿ ಸೂಚ್ಯಂಕಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹೊತ್ತಿನಲ್ಲೇ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪಾವೂರು ಗೇರುಕಟ್ಟೆಯ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಜಿಮ್ಮಿ ಕೊನೇರಿಯ (37) ಎಂಬುವವರ ಕುಟುಂಬವು ಕನಿಷ್ಠ ನಾಗರಿಕ ಸೌಕರ್ಯಗಳಿಗೂ ಪರದಾಡುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ ಒಂದು ದಶಕದಿಂದ ಈ ಕುಟುಂಬವು ಕಾಡಿನೊಳಗಿನ ಒಂದು ಮುರುಕು ಗುಡಿಸಲಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದೆ.

ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿ ಬೆಳೆದ ಜಿಮ್ಮಿ, ಇಂದು ಪತ್ನಿ ಲೀಲಾವತಿ ಮತ್ತು ಆರು ವರ್ಷದ ಮಗ ಜಿತೇಶ್ ಜೊತೆ ವಾಸಿಸುತ್ತಿದ್ದಾರೆ. ಅವರ ಪಾಲಿಗೆ ಬಂದಿರುವ ಸ್ವಂತ ಜಾಗ ದಟ್ಟ ಕಾಡಾಗಿ ಪರಿವರ್ತಿತವಾಗಿದೆ. ಅಲ್ಲಿರುವ ಪುಟ್ಟ ಗುಡಿಸಲು ಮಳೆಗಾಲದಲ್ಲಿ ಸೋರುತ್ತದೆ, ಬಾಗಿಲು ಅಥವಾ ಕಿಟಕಿಗಳಿಲ್ಲದ ಆ ಜೋಪಡಿಯಲ್ಲಿ ಪ್ರಾಣಿಗಳ ಕಾಟದ ಭೀತಿ ಸದಾ ಕಾಡುತ್ತದೆ. ರಾತ್ರಿ ವೇಳೆ ಮಳೆ ಜೋರಾದರೆ ಮಗುವನ್ನು ಕರೆದುಕೊಂಡು ನೆರೆಯವರ ಮನೆಗೆ ಓಡುವ ಪರಿಸ್ಥಿತಿ ಅವರದ್ದು.


ಈ ಕುಟುಂಬಕ್ಕೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಸಿಗದಿರಲು ಪ್ರಮುಖ ಕಾರಣ ಆಧಾರ್ ಕಾರ್ಡ್ ಇಲ್ಲದಿರುವುದು. ಪಂಚಾಯತ್ ಸದಸ್ಯರ ಬಳಿ ಹಲವು ಬಾರಿ ಅಲೆದರೂ ಪ್ರಯೋಜನವಾಗಿಲ್ಲ. ಫಲಿತಾಂಶವಾಗಿ, ಇವರಿಗೆ ಉಚಿತ ಪಡಿತರ ಸಿಗುತ್ತಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಕುಡಿಯುವ ನೀರಿಗೆ ಪಂಚಾಯತ್ ಒದಗಿಸುವ ಪೈಪ್ ಲೈನ್ ಅನ್ನೇ ಅವಲಂಬಿಸಿದ್ದಾರೆ. ಕಾಡಿನ ಬಳ್ಳಿಗಳಿಂದ ಬುಟ್ಟಿ ಹೆಣೆದು ಮಾರುವ ಮೂಲಕ ದೊರೆಯುವ ಅಲ್ಪಸ್ವಲ್ಪ ಹಣವೇ ಇವರ ಇಡೀ ಸಂಸಾರದ ಆದಾಯ.


ಶಾಲಾ ಅಧ್ಯಾಪಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಮನೆಗೆ ಭೇಟಿ ನೀಡಿ ಪೋಟೋ ತೆಗೆದುಕೊಂಡು ಹೋಗುತ್ತಾರೆಯೇ ಹೊರತು, ಇವರ ಬದುಕನ್ನು ಸುಧಾರಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಅಥವಾ ಸರ್ಕಾರದ ಯೋಜನೆಗಳು ಏನು ಎಂಬ ಅರಿವು ಕೂಡ ಅವರಿಗಿಲ್ಲ. ಸುಶಿಕ್ಷಿತ ಸಮಾಜದ ಕಣ್ಣೆದುರೇ ಒಬ್ಬ ನಾಗರಿಕನು ಆಧುನಿಕ ಸೌಲಭ್ಯಗಳಿಂದ ದೂರ ಉಳಿದಿರುವುದು ನಾಚಿಕೆಗೇಡಿನ ಸಂಗತಿ.
ಮಾನವೀಯತೆಯ ಅಗತ್ಯ

ಜಾತಿ, ಮತ, ಪಾರ್ಟಿ ಭೇದ ಮರೆತು ಈ ಕುಟುಂಬದ ಕಡೆಗೆ ಸರ್ಕಾರ ಮತ್ತು ಸಮಾಜ ಕೈಚಾಚಬೇಕಿದೆ. ಮಂಜೇಶ್ವರ ಗ್ರಾಮ ಪಂಚಾಯತ್ ಕೂಡಲೇ ಜವಾಬ್ದಾರಿಯುತವಾಗಿ ಸ್ಪಂದಿಸಿ, ಆ ಕುಟುಂಬಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟು, ಮನೆ ನಿರ್ಮಾಣ ಹಾಗೂ ಪಡಿತರ ಸೌಲಭ್ಯ ಕಲ್ಪಿಸಿಕೊಡುವುದು ತುರ್ತು ಅಗತ್ಯವಾಗಿದೆ. ಒಂದು ಬಾಲಕನ ಭವಿಷ್ಯವನ್ನು ರೂಪಿಸಲು ಸಮಾಜವು ಕನಿಷ್ಠ ಮಾನವೀಯತೆಯನ್ನು ಮೆರೆಯಬೇಕಿದೆ.
ಈ ಕುಟುಂಬದ ಬದುಕು ಬದಲಾಗಲು ಇನ್ನು ಎಷ್ಟು ಕಾಲ ಕಾಯಬೇಕು ಎಂಬುದು ನಾಗರಿಕ ಸಮಾಜವನ್ನೇ ಕಾಡುತ್ತಿರುವ ಪ್ರಶ್ನೆ.


