ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ: ಪ್ರಯಾಣಿಕರ ಸಂಕಷ್ಟಕ್ಕೆ ಪರಿಹಾರ ಸಿಗಲಿ

ಮಂಜೇಶ್ವರ: ಪ್ರಯಾಣಿಕರ ಸಂಕಷ್ಟ ಹಾಗೂ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಪರಿಹಾರ ಕಾಣದ ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ. ಲಿಫ್ಟ್ ಸೌಲಭ್ಯವಿಲ್ಲದಿರುವುದು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಮೇಲ್ಚಾವಣಿ ಇಲ್ಲದಿರುವುದರಿಂದ ವೃದ್ಧರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ಪ್ರಯಾಣಿಕರು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ.


ಬಹುತೇಕ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್‌ಗಳನ್ನು ಕಲ್ಪಿಸಲಾಗಿದ್ದರೂ, ಮಂಜೇಶ್ವರದಲ್ಲಿ ಈವರೆಗೆ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಲಗೇಜ್‌ಗಳೊಂದಿಗೆ ಬರುವವರು, ಅಶಕ್ತರು, ವೃದ್ಧರು ಮತ್ತು ಕೈಯಲ್ಲಿ ಹಸುಗೂಸುಗಳೊಂದಿಗೆ ಪ್ರಯಾಣಿಸುವ ತಾಯಂದಿರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಿಲ್ದಾಣದ ಮೆಟ್ಟಿಲುಗಳನ್ನು ಹತ್ತಿ ಇಳಿದು ರಾಷ್ಟ್ರೀಯ ಹೆದ್ದಾರಿಯನ್ನು ತಲುಪಿದರೂ, ರಸ್ತೆಯ ಮತ್ತೊಂದು ಬದಿಗೆ ತಲುಪಲು ಮತ್ತೆ ಮೆಟ್ಟಿಲುಗಳನ್ನು ಹತ್ತುವಂತಹ ದುಸ್ಥಿತಿ ಪ್ರಯಾಣಿಕರದ್ದಾಗಿದೆ. ಇಲ್ಲಿ ಲಿಫ್ಟ್ ಸೌಲಭ್ಯ ಕಲ್ಪಿಸಿದರೆ ಪ್ರಯಾಣಿಕರ ಈ ಗೋಳಿಗೆ ಬಹುಮಟ್ಟಿಗೆ ಪರಿಹಾರ ದೊರೆಯಲಿದೆ.

​ಬಿಸಿಲು-ಮಳೆಯಲ್ಲಿ ಕೊಡೆ ಹಿಡಿದು ಕಾಯುವ ದುಸ್ಥಿತಿ
​ನಿಲ್ದಾಣದ ಉತ್ತರ ಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಎರಡೂ ಕಡೆ ಮೇಲ್ಚಾವಣಿ ಇಲ್ಲದಿರುವುದು ನಿತ್ಯ ಪ್ರಯಾಣಿಕರಿಗೆ ದೊಡ್ಡ ತೊಂದರೆಯಾಗಿದೆ. ದಕ್ಷಿಣ ಭಾಗದಲ್ಲಿ ಹೆಸರಿಗೆ ಮಾತ್ರ ಎರಡೆಡೆ ಶೀಟ್‌ಗಳನ್ನು ಅಳವಡಿಸಲಾಗಿದ್ದರೂ, ಉತ್ತರ ಭಾಗದಲ್ಲಿ ಸಂಪೂರ್ಣವಾಗಿ ಇಲ್ಲ. ಸುಡುವ ಬಿಸಿಲು ಹಾಗೂ ಮಳೆಯಲ್ಲೂ ಕೊಡೆ ಹಿಡಿದುಕೊಂಡು ನಿಲ್ಲಬೇಕಾದ ಅನಿವಾರ್ಯತೆ ಪ್ರಯಾಣಿಕರಿಗಿದೆ.

​ಮಳೆಗಾಲದಲ್ಲಿ ಓವರ್‌ಬ್ರಿಡ್ಜ್‌ನಲ್ಲಿ ನೀರು ನಿಲ್ಲುವುದು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಮೇಲ್ಚಾವಣಿ ಇಲ್ಲದ ಕಾರಣ ಮಳೆನೀರು ಬಿದ್ದು ಜಾರುವಂತಾಗಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ.
ಮಂಜೇಶ್ವರ ರೈಲ್ವೆ ನಿಲ್ದಾಣದಿಂದ ಬರುವ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮತ್ತು ಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರೀಯ ಹೆದ್ದಾರಿ ದಾಟುವುದು ದೊಡ್ಡ ಸಾಹಸವೇ ಸರಿ. ಬಾಡಾಜೆ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಿಸುವುದಾಗಿ ಘೋಷಿಸಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ.

​ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಮೇಲ್ಸೇತುವೆಗೆ ಅನುಮತಿ ದೊರೆತಿದ್ದರೂ, ಕೆ.ಎಸ್.ಇ.ಬಿ. ವಿದ್ಯುತ್ ಲೈನ್‌ಗಳು ಹಾಗೂ ಜಲಮಂಡಳಿಯ ಪೈಪ್‌ಗಳನ್ನು ತೆರವುಗೊಳಿಸದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾಲೇಜು ರಸ್ತೆಯ ಸಮೀಪ ಎತ್ತರ ಹೆಚ್ಚಾಗಿರುವುದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಸಾಧ್ಯವಿಲ್ಲ ಎಂದು ನಿರ್ಮಾಣ ಸಂಸ್ಥೆಯಾದ ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋಆಪರೇಟಿವ್ ಸೊಸೈಟಿ ತಿಳಿಸಿದೆ.
​ಈ ಹಿನ್ನೆಲೆಯಲ್ಲಿ ಕಾಲೇಜು ರಸ್ತೆಯಿಂದ ದಕ್ಷಿಣಕ್ಕೆ ಸುಮಾರು 200 ಮೀಟರ್ ದೂರದಲ್ಲಿ ಹೊಸ ಮೇಲ್ಸೇತುವೆಗಾಗಿ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಇದು ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬ ಬಗ್ಗೆ ಆತಂಕ ಮುಂದುವರಿದಿದೆ.

​ನಿಲ್ದಾಣದಲ್ಲಿ ಅಗತ್ಯವಿರುವ ರೀತಿಯಲ್ಲಿ ಸೂಕ್ತ ರೈಲುಗಳು ನಿಲ್ಲುತ್ತಿಲ್ಲ ಎಂಬ ದೂರುಗಳಿವೆ. ಮಾವೇಲಿ ಎಕ್ಸ್‌ಪ್ರೆಸ್, ಚೆನ್ನೈ ಸೂಪರ್ ಫಾಸ್ಟ್ ಮುಂತಾದ ಪ್ರಮುಖ ರೈಲುಗಳಿಗೆ ಇಲ್ಲಿ ನಿಲುಗಡೆ ಕಲ್ಪಿಸಿದರೆ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.
​ಪ್ರಯಾಣಿಕರ ಈ ನಾನಾ ತೊಂದರೆಗಳಿಂದಾಗಿ, ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕೂಡ ಇತರೆ ಕಾಲೇಜುಗಳನ್ನು ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮಂಜೇಶ್ವರದ ಈ ಯಾತ್ರ ಪ್ರಯಾಣಿಕರ ಸಮಸ್ಯೆಗಳಿಗೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಸಾರ್ವಜನಿಕರ ಮತ್ತು ಪ್ರಯಾಣಿಕರ ಬಲವಾದ ಒತ್ತಾಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!