ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ವಿವಾದಿತ ಪ್ರಶ್ನೆ ಸಿದ್ಧಪಡಿಸಿ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಕುಂಬಳೆ ಶೈಕ್ಷಣಿಕ ಉಪಜಿಲ್ಲೆಯ ಪಳ್ಳತ್ತಡ್ಕ ಎಯುಪಿಎಸ್ ಶಾಲೆಯ ಅಧ್ಯಾಪಕ ಗುರುಪ್ರಸಾದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಆಗಸ್ಟ್ 6ರಂದು ಕುಂಬಳೆ ಮತ್ತು ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಕೂಲ್ ಸೋಷಿಯಲ್ ಸೈನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ‘ಫ್ರೀಡಂ ಕ್ವಿಝ್’ ಸ್ಪರ್ಧೆಯಲ್ಲಿ ವಿ.ಡಿ. ಸಾವರ್ಕರ್ ಕುರಿತಾಗಿ ವಿವಾದಾತ್ಮಕ ಪ್ರಶ್ನೆಯನ್ನು ಕೇಳಲಾಗಿತ್ತು.
ಇದು ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ನಿರ್ದೇಶನದಂತೆ ಕಾಸರಗೋಡು ಶೈಕ್ಷಣಿಕ ಜಿಲ್ಲಾ ಉಪ ಶಿಕ್ಷಣ ನಿರ್ದೇಶಕರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

ವರದಿಯ ಆಧಾರದ ಮೇಲೆ, 1958ರ ಕೇರಳ ಸಾರ್ವಜನಿಕ ಶಿಕ್ಷಣ ಕಾಯ್ದೆ ಸೆಕ್ಷನ್ 12ಎ ಅನ್ವಯ ಅಧ್ಯಾಪಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉದ್ಯೋಗದಿಂದ ಮುಕ್ತಗೊಳಿಸಲಾಗಿದೆ. ಜತೆಗೆ, ಇಲಾಖಾ ಮಟ್ಟದ ತನಿಖೆ ಎದುರಿಸಲು ಆಡಳಿತ ಮಂಡಳಿಗೂ ಸೂಚನೆ ನೀಡಲಾಗಿದೆ.

