ಕಳ್ಳರ ಭಯದಿಂದ ತಾನು ಮಣ್ಣಿನಲ್ಲಿ ಹೂತಿಟ್ಟಿದ್ದ ಸಂಪೂರ್ಣ ಉಳಿತಾಯದ ಹಣ ಒಂದು ವರ್ಷದ ಬಳಿಕ ನಾಶವಾಗಿದ್ದರಿಂದ ರಾಜಸ್ಥಾನದ ರೈತರೊಬ್ಬರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಮಂಗೀಲಾಲ್ ಮೇಘ್ವಾಲ್ ಎಂಬ ರೈತರು ಕಳ್ಳತನದ ಭಯದಿಂದ ₹5 ಲಕ್ಷವನ್ನು ತಮ್ಮ ಜಮೀನಿನಲ್ಲಿ ಕುಟುಂಬದವರಿಗೂ ತಿಳಿಯದಂತೆ ಹೂತಿಟ್ಟಿದ್ದರು. ಆದರೆ, ಮದ್ಯಪಾನದ ಚಟ ಹೊಂದಿದ್ದ ಅವರು ಹಣವನ್ನು ಹೂತಿಟ್ಟಿದ್ದ ಸ್ಥಳವನ್ನೇ ಮರೆತುಬಿಟ್ಟಿದ್ದರು.

ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತಮ್ಮ ಉಳಿತಾಯದ ಹಣವನ್ನು ಹೊರತೆಗೆಯಲು ಮುಂದಾದಾಗಲೇ ತಮಗೆ ಎದುರಾದ ಈ ದುರದೃಷ್ಟಕರ ಪರಿಸ್ಥಿತಿ ಅವರಿಗೆ ಗೊತ್ತಾಯಿತು. ಬಳಿಕ ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿ, ಎಲ್ಲರೂ ಸೇರಿ ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಲಿಲ್ಲ.

ಸುಮಾರು ಒಂದು ವರ್ಷದ ಬಳಿಕ ಟ್ರ್ಯಾಕ್ಟರ್ ಬಳಸಿ ಜಮೀನನ್ನು ಉಳುಮೆ ಮಾಡುತ್ತಿದ್ದ ವೇಳೆ, ಪಾಲಿಥೀನ್ ಚೀಲದಲ್ಲಿ ಸುತ್ತಿ ಹೂತಿಟ್ಟಿದ್ದ ಹಣ ಪತ್ತೆಯಾಯಿತು. ಆದರೆ, ತೇವಾಂಶದಿಂದ ನೋಟುಗಳು ಹಾಳಾಗಿದ್ದು, ಗೆದ್ದಲು ಹಿಡಿದ ಪರಿಣಾಮ ಸಂಪೂರ್ಣವಾಗಿ ಬಳಕೆಗೆ ಬಾರದಂತಾಗಿದ್ದವು.

