ಮಂಗಳೂರು: ಕಿಂಗ್ಸ್ ಚೆಸ್ ಅಕಾಡೆಮಿ ವತಿಯಿಂದ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಫಿಡೆ ರೇಟೆಡ್ ಚೆಸ್ ಟೂರ್ನಮೆಂಟ್-2026 ಅನ್ನು ಆಗಸ್ಟ್ 16ರಂದು ನಗರದ ಉರ್ವದಲ್ಲಿರುವ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಪ್ರಮುಖ ಪ್ರವೀಣ್ ಕಾಮತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದಿನದ ಈ ಪ್ರತಿಷ್ಠಿತ ಚೆಸ್ ಟೂರ್ನಮೆಂಟ್ನಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಫಿಡೆ ರೇಟಿಂಗ್ ಹೊಂದಿರುವ ಆಟಗಾರರು ಹಾಗೂ ಹೊಸ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಟೂರ್ನಮೆಂಟ್ ಉತ್ತಮ ವೇದಿಕೆಯಾಗಲಿದೆ. ವಿವಿಧ ವಯೋಮಾನದ ವಿಭಾಗಗಳ ಜೊತೆಗೆ ಓಪನ್ ವಿಭಾಗದಲ್ಲೂ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಒಟ್ಟು ₹1 ಲಕ್ಷ ನಗದು ಬಹುಮಾನ ಹಾಗೂ 153 ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಮಕ್ಕಳು ಮತ್ತು ಯುವಕರಲ್ಲಿ ಚೆಸ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಕಿಂಗ್ಸ್ ಚೆಸ್ ಅಕಾಡೆಮಿ ನಿರಂತರವಾಗಿ ವಿವಿಧ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ರಾಜ್ ಪೈ, ಅನುರಾಧ್, ಶರತ್ ಕುಮಾರ್ ಹಾಗೂ ವಿನಾಯಕ್ ಕಾಮತ್ ಉಪಸ್ಥಿತರಿದ್ದರು.

