ಕಾಸರಗೋಡು: ಆನ್ಲೈನ್ ಗೇಮ್ ಆಡುವುದನ್ನು ತಂದೆ ವಿರೋಧಿಸಿ ಫೋನ್ ಕಸಿದುಕೊಂಡಿದ್ದಕ್ಕೆ ಮನನೊಂದ 17 ವರ್ಷದ ಪ್ಲಸ್ ಟು ವಿದ್ಯಾರ್ಥಿ ಶಿವಸೂರ್ಯ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಆಗಸ್ಟ್ 8ರಿಂದ ಬಾಲಕ ಕಣ್ಣುಮುಚ್ಚಿಕೊಂಡಿದ್ದಾನೆ. ನಿತ್ಯ ಗೇಮ್ ಆಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದಲ್ಲದೆ, ಈತನಿಗೆ ಭಾರೀ ಹಣದ ನಷ್ಟವೂ ಸಂಭವಿಸಿತ್ತು. ಇದರಿಂದ ಆಕ್ರೋಶಗೊಂಡ ತಂದೆ ಮೊಬೈಲ್ ಪಡೆದಿಟ್ಟಿದ್ದರು.

ಇದರಿಂದ ನೊಂದ ಬಾಲಕ, ‘ನಾನು ಕಾಶಿಗೆ ಹೋಗುತ್ತೇನೆ, ಇನ್ನುಳಿದ ಜೀವನ ಅಲ್ಲಿ ಸವೆಸಿ ದೇವರ ಪಾದ ಸೇರುತ್ತೇನೆ’ ಎಂದು ಮರ್ಮಸ್ಪರ್ಶಿ ಪತ್ರ ಬರೆದಿಟ್ಟು ಮನೆಯಲ್ಲಿ ಯಾರೂ ಇಲ್ಲದ ವೇಳೆ ತೆರಳಿದ್ದಾನೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಈತನ ರಕ್ಷಣೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

