ಮಂತ್ರಾಲಯದಿಂದ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತ

ಪುತ್ತೂರು : ಮಂತ್ರಾಲಯಕ್ಕೆ ತೆರಳಿ ವಾಪಸ್ ಮಂಗಳೂರಿಗೆ ಬರುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಪುತ್ತೂರಿನ ಬೆಳಿಯೂರುಕಟ್ಟೆ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದ ಸಂದೀಪ್‌ ಶೆಟ್ಟಿ (44) ಎಂಬವರೆಂದು ಗುರುತಿಸಲಾಗಿದೆ.

ಆಗಸ್ಟ್ 9ರಂದು ಮಂಗಳೂರಿನಿಂದ ಬಸ್ ಮೂಲಕ ಮಂತ್ರಾಲಯಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ, ಅಲ್ಲಿಂದ ವಾಪಸ್‌ ಆಗುವ ವೇಳೆ ಘಟನೆ ನಡೆದಿದೆ. ಆಗಸ್ಟ್ 10ರ ರಾತ್ರಿ ಬಸ್ ಬಳ್ಳಾರಿಯ ಎಪಿಎಂಸಿ ಬಸ್‌ ನಿಲ್ದಾಣದಲ್ಲಿ ತಂಗಿತ್ತು. ರಾತ್ರಿ ಸುಮಾರು 2.30ರ ವೇಳೆಗೆ ಬಸ್ಸಿನಿಂದ ಇಳಿದ ಸಂದೀಪ್ ಶೆಟ್ಟಿ ನಿಲ್ದಾಣದಲ್ಲಿ ಕುಳಿತಿದ್ದರು. ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಗಮನಕ್ಕೆ ಬಂದ ಬಳಿಕ ಸಹ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಘಟನೆಯನ್ನು ದೃಢಪಡಿಸಿಕೊಂಡಿದ್ದಾರೆ. ಬಳಿಕ ಮೃತರ ಮಗನ ಮೊಬೈಲ್‌ಗೆ ಪೊಲೀಸರು ಸಂದೇಶ ಕಳುಹಿಸಿ ಮಾಹಿತಿ ನೀಡಿದ್ದಾರೆ. ಮೃತರ ಮಗ ದೃಪದ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕಾಲೇಜು ಅವಧಿಯಲ್ಲಿ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿದ್ದ ಕಾರಣ ಪೊಲೀಸರ ಸಂದೇಶವನ್ನು ಗಮನಿಸುವುದು ತಡವಾಗಿದೆ. ಮಧ್ಯಾಹ್ನದ ಬಳಿಕ ಸಂದೇಶ ಗಮನಿಸಿದ ಅವರು ತಾಯಿಯ ಸೋದರ ಮಾವ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದಾರೆ.

ಬಳಿಕ ಜಗದೀಶ್‌ ಶೆಟ್ಟಿ, ಮೃತರ ಪತ್ನಿ ವಿದ್ಯಾ ಶೆಟ್ಟಿ ಹಾಗೂ ಪುತ್ರ ದೃಪದ್ ಅವರು ಆಗಸ್ಟ್ 11ರಂದು ಸಂಜೆ ಬಳ್ಳಾರಿಗೆ ತೆರಳಿದ್ದಾರೆ. ಮೃತದೇಹವನ್ನು ಊರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ವಿದ್ಯಾ ಶೆಟ್ಟಿ, ಪುತ್ರ ದೃಪದ್ ಶೆಟ್ಟಿ , ತಾಯಿ ಕುಮುದಾ ಹಾಗೂ ಸಹೋದರ ದಿಲೀಪ್ ಅವರನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!