ಬಂಟ್ವಾಳ:ದ.ಕ.ಜಿಲ್ಲೆಯ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಕೃಷಿಯನ್ನು ಮಾಡುತ್ತಿದ್ದು, ನಾವೆಲ್ಲರೂ ಕೃಷಿಕರಾಗಿದ್ದೇವೆ ,ಕೃಷಿಯೇ ನಮ್ಮ ಜೀವನವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.ಅವರು ಕೃಷಿ ಇಲಾಖೆ ಬಂಟ್ವಾಳ ಇದರ , 2025 -26 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ,ATMA ( ಆತ್ಮ) ಯೋಜನೆಯಡಿ ” ಕಿಸಾನ್ ಗೋಷ್ಠಿ “ವಿವೇಚನಾತ್ಮಕ ಕೀಟನಾಶಕಗಳ ಬಳಕೆ ಹಾಗೂ ಬೆಳೆಗಳಲ್ಲಿ ಶೇಷಾಂಶ ತಗ್ಗಿಸಲು ಅಗತ್ಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ಖಾಸಗಿ ನಿವಾಸಿಗಳಿಗೆ ಬೆಳೆ ಸಮೀಕ್ಷೆ APP ಕುರಿತು ತರಬೇತಿ ಕಾರ್ಯಕ್ರಮ ಹಾಗೂ ಸಾಂಕೇತಿಕ ಇಲಾಖಾ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಬಿಸಿರೋಡಿನ ಅಂಬೇಡ್ಕರ್ ಸಭಾ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಣ್ಣ ಸಣ್ಣ ಹಿಡುವಳಿದಾರರಿದ್ದು, ಪುಲ್ ಟೈಮ್ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜನ ಬಹುತೇಕ ಕಡಿಮೆ. ಹಾಗಾಗಿ ಕೃಷಿ ಜೊತೆ ಇತರ ಕೆಲಸದ ಜೊತೆ ಬದುಕು ಸಾಗಿಸುವ ಜನರೇ ಹೆಚ್ಚು ಎಂದು ಅವರು ಹೇಳಿದರು.ಕೃಷಿಯಷ್ಟು ಒಳ್ಳೆಯ ಕೆಲಸ ಮತ್ತೊಂದಿಲ್ಲ, ನಮ್ಮ ದಿನದ ಅಲ್ಪ ಅವಧಿಯನ್ನು ಕೃಷಿಗಾಗಿ ಮೀಸಲಿಟ್ಟರೆ ನೆಮ್ಮದಿಯ ಬದುಕು ನಡೆಸಬಹುದು ಎಂದು ಹೇಳಿದರು.
ನಾನು ಇಂದಿಗೂ ಕೃಷಿಕ ಎಂದು ಗುರುತಿಸಿಕೊಳ್ಳಲು ಜಾಸ್ತಿ ಸಂತಸ ಪಡುತ್ತೇನೆ ಎಂದು ಹೇಳಿದರು.ಕೃಷಿಕರು ಆರ್ಥಿಕವಾಗಿ ಸದೃಢವಾದರೆ ಜಗತ್ತಿನಲ್ಲಿ ಭಾರತ ಬಲಿಷ್ಠವಾಗುತ್ತದೆ, ಪ್ರತಿಯೊಂದು ಹಳ್ಳಿಯೂ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಹೇಳಿದರು.ಪ್ರಸ್ತುತ ತಾಂತ್ರಿಕತೆಯ ಬೆಳವಣಿಗೆಯ ಮಧ್ಯೆ ಮಹಿಳೆಯರಿಗೆ ಬಹಳಷ್ಟು ಅವಕಾಶಗಳು ಇದ್ದು ಮಹಿಳೆಯರು ಮುಂದೆ ಬಂದು ಗ್ರಾಮಗ್ರಾಮಗಳಲ್ಲಿ ಹೊಸ ತಂತ್ರಜ್ಞಾನದ ಕಂಪೆನಿಯ ಮೂಲಕ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ,ಆರ್ಥಿಕವಾಗಿ ಗಟ್ಟಿಯಾಗಿ ಎಂದು ತಿಳಿಸಿದರು.
ಬೂಡ ಅಧ್ಯಕ್ಷ ಬೇಬಿಕುಂದರ್ ಮಾತನಾಡಿ, ಕೃಷಿ ಉಳಿದರೆ,ಪ್ರಕೃತಿ ಮತ್ತು ದೇಶ ಉಳಿಯುತ್ತದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೂಡ ನಡೆಯಲಿ ಎಂದು ಹೇಳಿದರು.ವೇದಿಕೆಯಲ್ಲಿ ಕೃಷಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಕುಮುದ ,ಬಂಟ್ವಾಳ
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ.ಸೋಜ,ಸಿ.ಪಿ.ಸಿ.ಆರ್ .ಐ.ವಿಟ್ಲ ಸಂಸ್ಥೆಯ ವಿಜ್ಞಾನಿ ಡಾ| ಮದು,ಬಂಟ್ವಾಳ ಕೃಷಿ ಇಲಾಖೆಯ ತಾಲೂಕು ಅಧಿಕಾರಿ ನಂದನ್ ಶೆಣೈ ಉಪಸ್ಥಿತರಿದ್ದರು.
ಕೃಷಿಯ ಆತ್ಮ ಯೋಜನೆಯಡಿ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ವಿಭಿನ್ನ ಶೈಲಿಯ ಕೃಷಿ ಮಾಡಿ ಗಮನ ಸೆಳೆದ ಸಾಧಕರಿಗೆ ಆತ್ಮ ಶ್ರೇಷ್ಠ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಸಹಾಯಕ ಅಧಿಕಾರಿ ವೀಣಾ ಆರ್.ಕೆ. ಸ್ವಾಗತಿಸಿದರು.