ಮಂಜೇಶ್ವರ: ನೂತನವಾಗಿ ನಿರ್ಮಾಣಗೊಂಡ ಮಂಜೇಶ್ವರದ ರಾಗಂ ಜಂಕ್ಷನ್ ರಾಷ್ಟ್ರೀಯ ಷಟ್ಪಥ ರಸ್ತೆ ಹೆದ್ದಾರಿಗಳು ದಿನದಿಂದ ದಿನಕ್ಕೆ ಅಪಾಯಕರವಾಗುತ್ತಿದೆ ಈ ರಸ್ತೆಯಲ್ಲಿ ಕಂಡುಬರುತ್ತಿರುವ ಕೆಲವ್ಲೆಂದು ದೃಶ್ಯಗಳು ಜನರಲ್ಲಿ ಆತಂಕ ಹಾಗೂ ಭಯವನ್ನು ಮೂಡಿಸುತ್ತಿವೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಮೇಲ್ಸೇತುವೆ (ಫ್ಲೈಓವರ್) ನಿರ್ಮಿಸಲಾಗಿದ್ದರೂ, ವಿದ್ಯಾರ್ಥಿಗಳು ಸುರಕ್ಷಿತವಾಗಿ ಅದನ್ನು ಬಳಸದೆ ಅಪಾಯಕರವಾದ ರೀತಿಯಲ್ಲಿ ತಡೆಗೋಡೆಗಳ ಮೇಲಿಂದ ಹಾರಿ ರಸ್ತೆ ದಾಟುತ್ತಿರುವುದು ನಿತ್ಯ ದರ್ಶನವಾಗಿದೆ.
ಮಂಜೇಶ್ವರ ರಾಗಂ ಜಂಕ್ಷನ್ ಬಳಿಯ ರೈಲ್ವೇ ನಿಲ್ದಾಣಕ್ಕೆ ತಲುಪಲು ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ಕಣ್ಣೂರು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ದಿನವೂ ರಸ್ತೆ ದಾಟಲು ಮೇಲ್ಸೇತುವೆ ಇದ್ದರೂ ಅದನ್ನು ಬಳಸದೆ, ತಡೆಗೋಡೆಗಳ ಮೇಲೆ ಹಾರಿ, ವೇಗವಾಗಿ ಚಲಿಸುತ್ತಿರುವ ವಾಹನಗಳ ಮಧ್ಯೆ ರಸ್ತೆಯ ಮತ್ತೊಂದು ದಿಕ್ಕಿಗೆ ಚಲಿಸುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗುತ್ತಿದೆ.
ಈಗಾಗಲೇ ಈ ಪರಿಸರದಲ್ಲಿ ರಸ್ತೆ ದಾಟುತ್ತಿರುವ ಮಧ್ಯೆ ಹಲವು ಅವಘಾತಗಳು ಅದೇ ರೀತಿ ಸಾವು ಕೂಡಾ ಸಂಭವಿಸಿತ್ತು. ಇದಕ್ಕಾಗಿ ಊರಿನವರು ಒಟ್ಟಾಗಿ ಕ್ರಿಯಾ ಸಮಿತಿ ರೂಪಿಸಿ ಹೋರಾಟ ನಡೆಸಿದ ಬಳಿಕ ಇಲ್ಲಿ ಮೇಲ್ಸೇತುವೆ ನಿರ್ಮಿಸಲು ಅನುಮತಿ ಲಭಿಸಿತ್ತು.
ಇದೀಗ ರೈಲಿನಲ್ಲಿ ಆಗಮಿಸುವ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಅಮಿತ ವೇಗದಲ್ಲಿ ಆಗಮಿಸುವ ವಾಹನಗಳನ್ನು ಲೆಕ್ಕಿಸದೆ ತಡೆಗೋಡೆಗಳ ಮೇಲಿನಿಂದ ಜಿಗಿದು ರಸ್ತೆಗೆ ಇಳಿಯುವ ದುಸ್ಸಾಹಸ ಮಾಡುತ್ತಿರುವ ದೃಶ್ಯ ನೋಡುವವರ ಮೈ ಜುಂ ಅನಿಸುತ್ತದೆ.
ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಮಕ್ಕಳ ಸುರಕ್ಷೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.ಮೇಲ್ಸೇತುವೆ ಬಳಕೆಗಾಗಿ ಸ್ಪಷ್ಟವಾಗಿ ಸೂಚಿಸುವ ಬೋರ್ಡುಗಳು ಹಾಗೂ ಮಾರ್ಗದರ್ಶನದ ಅಗತ್ಯವಿದೆ.