ಮಂಜೇಶ್ವರ : ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳಿಗೆ ಯಾವುದೇ ಪರಿಹಾರವನ್ನು ಕಲ್ಪಿಸದ ಅಧಿಕಾರಸ್ಥರ ವಿರುದ್ಧ ಹಾಗೂ ಕೈಕಂಬದ ಅಪಾರ್ಟ್ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು.
ಕೈಕಂಬ ಅಪಾರ್ಟ್ಮೆಂಟ್ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರಣಗೊಳ್ಳುತ್ತಿದ್ದು ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತಿದ್ದರೂ ಇವರ ವಿರುದ್ಧ ನಿರಂತರ ದೂರು ನೀಡಲಾಗುತಿದ್ದರೂ ಇದ್ಯಾವುದನ್ನೂ ಲೆಕ್ಕಿಸದೆ ನಿರಂತರವಾಗಿ ಫ್ಲಾಟ್ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದ್ದರೂ ಈ ಬಗ್ಗೆ ಪಂಚಾಯತು, ಆರೋಗ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಮೌನ ವಹಿಸಿದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಇದರ ವಿರುದ್ಧ ಸೂಚನಾ ಪ್ರತಿಭಟನೆ ನಡೆಸಿದೆ.
ಕೂಡಲೇ ಸಂಬಂಧಪಟ್ಟವರು ಇದಕ್ಕೆ ಸ್ವಂಧಿಸದೆ ಇದ್ದರೆ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದೆ.
ಮಲಿನ ಜಲ ಹರಿಯ ಬಿಡಲಾಗುತ್ತಿರುವ ಅಪಾರ್ಟ್ ಮೆಂಟ್ ಮುಂಬಾಗದಲ್ಲಿ ಪ್ರತಿಭಟನಾ ನಿರತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಮಾನವ ಹಕ್ಕುಗಳ ಹೋರಾಟಗಾರ ಕುಕ್ಕಿಲ್ ಬಾಲಕೃಷ್ಣ ಪ್ರತಿಭಟನಾ ಧರಣಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವೈಜ್ಞಾನಿಕ ಕಟ್ಟಡ ನಿರ್ಮಾಣ ನಿಯಮಗಳನ್ನು ಪಾಲಿಸದಿರುವುದು ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿದೆ.
ಇಂತಹ ನಿರ್ಲಕ್ಷ್ಯಗಳು ಸಮಾಜದಲ್ಲಿ ದೂರವ್ಯಾಪಕ ಪರಿಣಾಮ ಉಂಟುಮಾಡಬಹುದು ಎಂದು ಅವರು ಹೇಳಿದರು. ಈ ಸಂದರ್ಭ ಕ್ರಿಯಾಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.