ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ (ಸ.ಅ.ವ) ಅವರ ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್ ನಬಿ ಪವಿತ್ರತೆಯೊಂದಿಗೆ ಹಾಗೂ ಭಕ್ತಿ ಭಾವದಿಂದ ಮಂಜೇಶ್ವರದಾದ್ಯಂತ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಮೌಲೂದ್ ಪಠಣ, ಧಾರ್ಮಿಕ ಉಪನ್ಯಾಸಗಳು ಮತ್ತು ಪ್ರಾರ್ಥನೆಗಳು ನೆರವೇರಿದವು.
ಮಂಜೇಶ್ವರದ ಪ್ರಮುಖ ಬೀದಿಗಳು ಹಸಿರು ಧ್ವಜಗಳು, ಬೆಳಕಿನ ಅಲಂಕಾರ ಮತ್ತು ಧಾರ್ಮಿಕ ಸಂದೇಶಗಳಿಂದ ಕಂಗೊಳಿಸಿತು. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರೂ ಶೋಭಾಯಾತ್ರೆಗಳಲ್ಲಿ ಪಾಲ್ಗೊಂಡು ಪ್ರವಾದಿಯ ಜೀವನೋಪದೇಶಗಳನ್ನು ಸ್ಮರಿಸಿದರು.
ಧಾರ್ಮಿಕ ಪಂಡಿತರು ಪ್ರವಾದಿಯ ಆದರ್ಶಗಳನ್ನು ಪಾಲಿಸುವ ಮಹತ್ವವನ್ನು ಉದ್ಬೋಧಿಸಿದರು. ಸಹೋದರತ್ವ, ಶಾಂತಿ, ಪ್ರೀತಿ ಮತ್ತು ಪರಸ್ಪರ ಸಹಕಾರದ ಸಂದೇಶವನ್ನು ಪ್ರವಾದಿಯ ಜೀವನವು ನೀಡುತ್ತದೆ ಎಂದು ಉಲ್ಲೇಖಿಸಲಾಯಿತು.
ಉದ್ಯಾವರ ಸಾವಿರ ಜಮಾಹತ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಜಮಾಹತ್ ಮದರಿಸ್ ಬಿ ಎಂ ಅಬ್ದುಲ್ ಖಾದರ್ ಮದನಿ ಪ್ರಾರ್ಥಣೆ ನೆರವೇರಿಸಿದರು.
ಜಮಾಹತ್ ಅಧ್ಯಕ್ಷ ಸಯ್ಯದ್ ಸೈಫುಲ್ಲಾ ತಂಘಲ್ ಧ್ವಜಾರೋಹಣಗೈದರು. ಈ ಸಂದರ್ಭ ಜಮಾಹತ್ ಖತೀಬ್ ಅಶ್ರಫ್ ಫೈಝಿ, ಅತ್ತಾವುಲ್ಲ ತಂಘಲ್, ಸಮಿತಿ ಪ್ರ. ಕಾರ್ಯದರ್ಶಿ ಇಬ್ರಾಹಿಂ ಬಟರ್ ಫ್ಲೈ, ಇತರ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಜಮಾಹತ್ ನ 13 ಮೊಹಲ್ಲಾದ ಮದ್ರಸ ವಿದ್ಯಾರ್ಥಿಗಳಿಂದ ಬೃಹತ್ ಮಿಲಾದ್ ರಾಲಿ ನಡೆಯಿತು.
ಅದೇ ರೀತಿ ಕುಂಜತ್ತೂರು ಜುಮಾ ಮಸೀದಿ, ಮಂಜೇಶ್ವರ ಪಾಂಡ್ಯಲ್ ಮಸೀದಿ , ಪೊಸೋಟು ಜುಮಾ ಮಸೀದಿ, ಬಂಗ್ರ ಮಂಜೇಶ್ವರ ಸೇರಿದಂತೆ ವಿವಿಧ ಮಸೀದಿ ಸಮಿತಿಗಳ ನೇತೃತ್ವದಲ್ಲಿ ಬೃಹತ್ ಮಿಲಾದ್ ರಾಲಿ ನಡೆಯಿತು