ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದ …. !

ಮಂಗಳೂರು: ಕನ್ನಡ ಭಾಷೆಯ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ನಿರ್ದೇಶಕ ವಿನಾಯಕ್ ಇನ್ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದರು. ಅವರು ಹೇಳಿದ ಕಥೆ ಕೇಳಿ ಖುಷಿಯಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದೇನೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟು ನನ್ನನ್ನು ಬೆಳೆಸಿರುವ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ನನ್ನ ಗುರುಗಳು. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು ತುಳುವರು ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಹರಸಿ“ ಎಂದರು.
ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ಲಿಖಿತ್ ಶೆಟ್ಟಿ ನನ್ನ ಆತ್ಮೀಯರು. ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ತುಳುನಾಡಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಮಂದಿ ಸಾಧನೆ ಮಾಡಿದ ಕಲಾವಿದರಿದ್ದಾರೆ. ಕನ್ನಡಿಗರು ಮತ್ತು ತುಳುವರು ಒಟ್ಟು ಸೇರಿ ಸಿರ್ಮಿಸಿರುವ ಸಿನಿಮಾ ಇದಾಗಿದ್ದು ಎಲ್ಲರೂ ಹೊಸಬರ ಪ್ರಯತ್ನಕ್ಕೆ ಸಹಕಾರ ನೀಡಬೇಕು“ ಎಂದು ಮನವಿ ಮಾಡಿದರು.

ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಮಾತಾಡಿ, ”ಫುಲ್ ಮೀಲ್ಸ್ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ, ಸುಮಧುರ ಪ್ರೇಮಕತೆ ಮತ್ತು ಮನೋರಂಜನೆಯ ಫುಲ್ ಮೀಲ್ಸ್ ಆಗಿದೆ. ಸಿನಿಮಾದ ಹಾಡುಗಳು ಮುದ ನೀಡುತ್ತಿದ್ದು ಸಿನಿಮಾವನ್ನು ಪ್ರೇಕ್ಷಕ ಇಷ್ಟಪಡಲು ಬೇಕಾದ ಎಲ್ಲ ಅಂಶಗಳು ಇದರಲ್ಲಿವೆ“ ಎಂದರು.

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಫುಲ್ ಮೀಲ್ಸ್’ ಒಳಗೊಂಡಿದೆ. ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಚಿತ್ರವು ಒಳಗೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಹಾಗೂ ಚಿತ್ರದ ಹಾಡು ‘ವಾಹ್ ಏನೋ ಹವಾ’ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಸಾಕಷ್ಟು ಜನಯಪ್ರಿಯತೆ ಗಳಿಸಿ, ಚಿತ್ರದ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಿವೆ. ‘ಸಂಕಷ್ಟ ಕರ ಗಣಪತಿ’, ‘ಫ್ಯಾಮಿಲಿ ಪ್ಯಾಕ್’, ‘ಅಬ್ಬಬ್ಬ’ ಖ್ಯಾತಿಯ ಲಿಖಿತ್ ಶೆಟ್ಟಿ ರವರು ‘ಫುಲ್ ಮೀಲ್ಸ್’ ಚಿತ್ರಕ್ಕೆ ನಾಯಕರಾಗಿ ಅಭಿನಯಿಸಿದ್ದಾರೆ ಅದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.
‘ದಿಯಾ’ ಚಿತ್ರದ ಖ್ಯಾತಿಯ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ನಾಯಕಿಯರಾಗಿ ಅಭಿನಯಿಸಿದ್ದು, ಚಿತ್ರಕ್ಕೆ ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ‌, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!