ಮಂಗಳೂರು: ಕರಾವಳಿ ಕರ್ನಾಟಕದ ಕಂಬಳ ಕ್ರೀಡೆಯು ಅಂತರಾಷ್ಟ್ರೀಯ ಮನ್ನಣೆ ಪಡೆದಿರುವ ಸಾಹಸ ಕ್ರೀಡೆ. ಕರ್ನಾಟಕ ಸರಕಾರ ಕ್ರೀಡಾ ಪ್ರಾಧಿಕಾರದಡಿ ಮಾನ್ಯತೆ ನೀಡಿ ರಾಜ್ಯ ಕಂಬಳ ಅಸೋಸಿಯೇಶನ್ (ರಿ.) ಅಸ್ಥಿತ್ವಕ್ಕೆ ಬಂದಿರುವುದರಿಂದ ಕಂಬಳದ ಗೌರವ ಹೆಚ್ಚಿದೆ. ಇದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ನಮ್ಮ ಉಭಯ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ರಾಜ್ಯ ಕಂಬಳ ಅಸೋಸಿಶಿಯನ್ ಇದರ ಅಧ್ಯಕ್ಷರಾದ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆಯನ್ನು ನೀಡಿ , ಕಂಬಳ ಕ್ರೀಡೆಯನ್ನು ರಾಜ್ಯ, ದೇಶ, ವಿದೇಶಗಳಲ್ಲಿ ಲಕ್ಷಾಂತರ ಜನ ವೀಕ್ಷಿಸುತ್ತಾರೆ. ಕಂಬಳ ಕ್ರೀಡೆಯ ಆಯೋಜನೆಗೆ 40 ರಿಂದ 50 ಲಕ್ಷ ವೆಚ್ಚವಾಗುತ್ತದೆ. ಕಂಬಳ ಕೋಣಗಳಿಗೆ, ಓಟಗಾರರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಗುವುದು. ಕಂಬಳ ಕ್ರೀಡಾ ಇಲಾಖೆಗೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಉತ್ತೇಜನ ನೀಡುವ ಕ್ರೀಡೆಯಾಗಿದೆ. ಹಾಗಾಗಿ ಮುಂಬರುವ ಅಧಿವೇಶನದಲ್ಲಿ ಜಿಲ್ಲೆಯಲ್ಲಿ ನಡೆಯುವ 25 ಜೋಡುಕೆರೆ ಕಂಬಳಗಳಿಗೆ ಕ್ರೀಡಾ ಇಲಾಖೆ 2.5 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆ 2.5 ಕೋಟಿ ರೂಪಾಯಿ ಒಟ್ಟು 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಸ್ಪರ್ಧೆಗೆ ಅವಕಾಶ ಇರುವದಿಲ್ಲ . ಇದರಿಂದ 4-5 ತಾಸು ಉಳಿತಾಯ ಆಗುವುದು. ಸರಕಾರದ ನಿಯಮವನ್ನು ಪಾಲಿಸಿ ಕಂಬಳವನ್ನು ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಂಬಳಕ್ಕೆ ರಾಷ್ಟ್ರೀಯ ಮನ್ನಣೆ ಸಿಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಲಾಗುವುದು. ಕಂಬಳಕ್ಕೆ ಅನುದಾನ ಬಿಡುಗಡೆ ಆದಲ್ಲಿ ಆಟಗಾರಿಗೂ, ಮಾಲೀಕರಿಗೂ, ಸಂಘಟಕರಿಗೂ ಸಹಾಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚೂರು, ಸದಸ್ಯರಾದ ಅರುಣ ಕುಮಾರ್ ಶೆಟ್ಟಿ,ಸಂದೀಪ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.