ಗೋವುಗಳನ್ನು ಕಳವು ಮಾಡಿ ಹತ್ಯೆ ಮಾಡಿದ ೮ ಮಂದಿ ಆರೋಪಿಗಳು ಬಜ್ಪೆ ಪೊಲೀಸರ ವಶಕ್ಕೆ … !

ಮಂಗಳೂರು: ಬಜ್ಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಂಜಾರು, ಕರಂಬಾರು, ಭಟ್ರಕೆರೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‌ನ 8 ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾನುವಾರು ಕಳ್ಳತನ ಹಾಗೂ ಮಾಂಸ ಮಾರಾಟ-ಸಾಗಾಟಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳ ಕುರಿತು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರಿದಿದೆ.

ಜುಲೈ ತಿಂಗಳಲ್ಲಿ ಬಜ್ಪೆಗೆ ಸಮೀಪದ ಭಟ್ರಕೆರೆ ಮಸೀದಿಯ ಬಳಿ ಸುಮಾರು 50 ಸಾವಿರ ರೂ. ಮೌಲ್ಯದ ಜೆರ್ಸಿ ದನವನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದ್ಯಪಾಡಿ ಸೈಟ್ ನಿವಾಸಿ ಮನ್ಸೂರು ಆದ್ಯಪಾಡಿ (42), ತೊಕ್ಕೊಟ್ಟು-ಪೆರ್ಮನ್ನೂರು ಗ್ರಾಮದ ಮಹಮ್ಮದ್ ಅಶ್ವದ್ (25) ಹಾಗೂ ಉಲ್ಲಾಳ ತಾಲೂಕಿನ ಕೋಟೆಪುರ ನಿವಾಸಿ ರಿಲ್ವಾನ್ ಅಹ್ಮದ್ ಅಲಿಯಾಸ್ ರಿಲ್ಲು (26) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 5 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಡಿ.12ರಂದು ಕೆಂಜಾರು ಗ್ರಾಮದ ಕಪಿಲಾ ಗೋ ಶಾಲೆಯ ಬಳಿ ಮೇಯಲು ಬಿಟ್ಟಿದ್ದ 8 ದನಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜೋಕಟ್ಟೆ-ತೋಕೂರು ಗ್ರಾಮದ ಹಸನಬ್ಬ (40) ಹಾಗೂ ಜೋಕಟ್ಟೆ ನಿವಾಸಿ ಮೊಹಮ್ಮದ್ ರಫೀಕ್ (56) ಎಂಬವರನ್ನು ಬಂಧಿಸಲಾಗಿದೆ. ಇವರಿಂದ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಇನ್ನು ಡಿ.20ರಂದು ಕರಂಬಾರಿನಲ್ಲಿ 6 ದನಗಳನ್ನು ಕಳ್ಳತನ ಮಾಡಿ ಓಮ್ಮಿ ಕಾರು ಗೂಡ್ಸ್ ಹಾಗೂ ಇನ್ನೊಂದು ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಗಳಾದ ಕೆಂಜಾರು ಗ್ರಾಮದ ಕರಂಬಾರು ನಿವಾಸಿ ಅಬ್ದುಲ್ ರಹಿಮಾನ್ ಶಫೀರ್ (21), ಪೇಜಾವರ ನಿವಾಸಿ ಹಸನ್ ಸಜಾದ್ (18) ಹಾಗೂ ಕೆಂಜಾರು ಗ್ರಾಮದ ನಿವಾಸಿಯಾಗಿದ್ದು ಪ್ರಸ್ತುತ ಕಿನ್ನಿಪದವು ನಿವಾಸಿಯಾಗಿರುವ ಎ.ಕೆ. ಅಹಮ್ಮದ್ ಆದಿಲ್ (20) ಎಂಬವರನ್ನು ಡಿ.21ರಂದು ಬಂಧಿಸಲಾಗಿದೆ.ಬಂಧಿತರಿಂದ ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!