ದೇವಸ್ಥಾನದ ಭೂಮಿ, ಅಸ್ಥಿತ್ವಕ್ಕೆ ಧಕ್ಕೆ ಆಗದಂತೆ ರಸ್ತೆ ನಿರ್ಮಾಣವಾಗಲಿ
ಉಡುಪಿ: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯದಲ್ಲಿ ನಾವೆಲ್ಲರೂ ಕಟಿಬದ್ಧರಾಗಿ ಪಾಲ್ಗೊಳ್ಳಬೇಕು. ದೇವಸ್ಥಾನದ ಭೂಮಿ ಹಾಗೂ ಅಸ್ಥಿತ್ವಕ್ಕೆ ಧಕ್ಕೆ ಆಗದಂತೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯಬೇಕು ಎಂದು ದೇವಸ್ಥಾನದ ತಂತ್ರಿ ವಿದ್ವಾನ್ ಕೆ.ಪಿ. ಕುಮಾರ ಗುರು ಕರೆನೀಡಿದರು.
ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವದ ಸಂದರ್ಭದಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಭೂಮಿ ಮತ್ತು ಪರಿದಿಯನ್ನು ಉಳಿಸುವುದು ಪ್ರತಿಯೊಂದು ಗ್ರಾಮಸ್ಥರ ಕರ್ತವ್ಯ. ಅರ್ಜಿಯ ಮೂಲಕ ಸಮಸ್ಯೆ ಬಗೆಹರಿಯುವುದಿಲ್ಲ. ಇದಕ್ಕೆ ಹೋರಾಟವೇ ಅನಿವಾರ್ಯ. ನಿಮ್ಮೊಂದಿಗೆ ನಾನು ಇದ್ದೇನೆ. ನಾನು ಯಾವುದೇ ಪಕ್ಷದ ವಿಷಯದಲ್ಲಿ ಇಲ್ಲ. ಅನಂತಪದ್ಮನಾಭನಲ್ಲಿ ಯಾವ ಪಕ್ಷದವರು ಇದ್ದರೋ ಆ ಪಕ್ಷದಲ್ಲಿ ನಾನು ಇದ್ದೇನೆ. ನಾವೆಲ್ಲರೂ ಅನಂತಪದ್ಮನಾಭನ ಪಕ್ಷದವರು. ಹಾಗಾಗಿ ಇಲ್ಲಿ ಪಕ್ಷದ ವಿಷಯ ಇಲ್ಲ. ಅನಂತಪದ್ಮನಾಭನ ಭೂಮಿ ಅನಂತಪದ್ಮನಾಭ ದೇವರಿಗೆ ವಿನಿಯೋಗ ಆಗಬೇಕು ಎಂದರು.
ದೇವಸ್ಥಾನದ ಅಸ್ಥಿತ್ವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಘಟನೆ ನಡೆದಾಗ ಸುಮ್ಮನೆ ಕೂತರೆ ನಾವು ಇದ್ದು ಸತ್ತಂತೆ. ಇತಿಹಾಸ ಪ್ರಸಿದ್ಧ ದೊಡ್ಡ ಭವ್ಯ ಪರಂಪರೆಯ ಈ ದೇವಾಲಯದ ಭೂಮಿಯು ಯಾವುದೋ ಒಂದು ಕಾರಣಕ್ಕೆ ಹೋಗುತ್ತದೆ ಎನ್ನುವಾಗ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ನಾವು ಸುಮ್ಮನಿದ್ದರೆ ನಾವು ದೇವರ ಮಕ್ಕಳು ಎನ್ನುವುದರಲ್ಲಿ ಅರ್ಥವಿಲ್ಲ. ನಾವು ಬದುಕಿಯೂ ಸತ್ತಂತೆ ಆಗುತ್ತದೆ. ಆದ್ದರಿಂದ ಜೀಣೋದ್ಧಾರ ಕಾರ್ಯಗಳು ಒಳ್ಳೆಯ ರೀತಿಯಲ್ಲಿ ಆರಂಭಗೊಳ್ಳಲಿ. ಆ ದೇವರು ನಮಗೆ ಅನುಗ್ರಹ ಮಾಡಲಿ ಎಂದು ಹಾರೈಸಿದರು.