ಸುಬ್ರಹ್ಮಣ್ಯ: ರಾಜ್ಯ ಸರ್ಕಾರ ಶುಕ್ರವಾರ ಘೋಷಿಸಿದ ರಜಾ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಭಕ್ತರು ಶೇಷ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ, ಮಹಾಪೂಜೆ ಸೇರಿದಂತೆ ವಿವಿಧ ಸೇವೆಗಳನ್ನು ಭಕ್ತಿಭಾವದಿಂದ ನೆರವೇರಿಸಿ ಧನ್ಯರಾದರು. ದೇವಸ್ಥಾನದಲ್ಲಿ ದಿನಪೂರ್ತಿ ಭಕ್ತರ ಹರಿವು ನಿರಂತರವಾಗಿ ಕಂಡುಬಂತು.
ಈ ವೇಳೆ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಭಕ್ತರ ಸುಗಮ ದರ್ಶನಕ್ಕೆ ಹಾಗೂ ವಿವಿಧ ಸೇವೆಗಳ ವ್ಯವಸ್ಥೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಯಿತು.
ಮಧ್ಯಾಹ್ನದ ವೇಳೆಗೆ ದೇವಳದ ಹೊರಾಂಗಣದಲ್ಲಿ ವಿವಿಧ ಸೇವೆಗಳನ್ನು ನಡೆಸಲು ಭಕ್ತರು ಹೆಚ್ಚಾಗಿ ಜಮಾಯಿಸಿದ್ದರು. ನಾಗಪ್ರತಿಷ್ಠಾ ಮಂಟಪದ ಎದುರು ನಡೆಯಲು ಸ್ಥಳವಿಲ್ಲದಷ್ಟು ಭಕ್ತರು ಕುಳಿತಿರುವ ದೃಶ್ಯ ಕಂಡುಬಂತು.