ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ

ಉಡುಪಿ: ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಶನಿವಾರ ಮಣಿಪಾಲ ಟೈಗರ್ ಸರ್ಕಲ್ ಬಳಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಮಣಿಪಾಲದ ಬ್ರಹ್ಮ ಡಾ. ಟಿ.ಎಂ.ಎ.ಪೈ ಅವರ ಪುತ್ತಳಿಗೆ ಪುಷ್ಪ ನಮನ ಅರ್ಪಿಸಿ, ಈ ಯುದ್ಧ ನೀತಿಗಳಿಂದ ಮಡಿದವರಿಗೆ ಗೌರವ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ರಾಮಾಂಜಿ, ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಜಾಗತಿಕ ಯುದ್ಧ ಸಂಬಂಧಿ ಘಟನೆಗಳನ್ನು ನೋಡಿ ಮನನೊಂದು ನೈತಿಕ ಪ್ರತಿಭಟನೆ ಮಾಡುತ್ತಿದ್ದೇನೆ. ಈ ಕುರಿತು ಈಗಾಗಲೇ ಉಡುಪಿ, ಕುಂದಾಪುರ, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಇದೀಗ ನಾಲ್ಕನೇ ಬಾರಿಗೆ ಪ್ರತಿಭಟನಾ ಚಳುವಳಿ ನಡೆಸುತ್ತಿದ್ದೇನೆ. ಜಾಗತಿಕ ಮಟ್ಟದ ಸಹಬಾಳ್ವೆ, ಶಾಂತಿ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆ, ಮಾನವ ಪ್ರೀತಿ, ಪರಿಸರ ಕಾಳಜಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಬೇಕು ಎಂದರು.


ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಯುದ್ಧಗಳು ಮಾನವ ಸಮಾಜ ಹಾಗೂ ಪರಿಸರಕ್ಕೆ ಮಾರಕವಾಗಿವೆ. ಇದರ ಅಪಾಯಗಳನ್ನು ನಾವೆಲ್ಲರೂ ಅರಿಯಬೇಕು. ಪ್ರಪಂಚದ ಒಳಿತಿಗಾಗಿ ರಾಮಾಂಜಿಯವರು ನಡೆಸುತ್ತಿರುವ ಈ ಧರಣಿಯನ್ನು ಸಾರ್ವಜನಿಕರಾದ ನಾವೆಲ್ಲರೂ ಬೆಂಬಲಿಸಬೇಕು. ಜಾಗತಿಕ ಯುದ್ಧದ ವಿರುದ್ಧ ಧ್ವನಿ ಎತ್ತಿ ಏಕಾಂಗಿಯಾಗಿ ಧರಣಿ ಕುಳಿತ ಮೊದಲ ವ್ಯಕ್ತಿ ಇವರು. ನಮ್ಮ ಸಮಾಜದ ಒಬ್ಬ ಮಾದರಿ ವ್ಯಕ್ತಿಯಾಗಿ ಅವರು ಕೈಗೊಂಡ ಈ ಕಾರ್ಯ ಜನಾಂದೋಲನವಾಗಿ ರೂಪಗೊಳ್ಳಲಿ ಎಂದು ತಿಳಿಸಿದರು.


ಬೆಳಿಗ್ಗೆ ೮:೩೦ರಿಂದ ಸಂಜೆ ೬:೩೦ವರೆಗೆ ನಡೆದ ಪ್ರತಿಭಟನೆಗೆ ಹಲವು ಮಂದಿ ಬೆಂಬಲ ಸೂಚಿಸಿದ್ದು, ಸ್ಥಳಕ್ಕೆ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ರಂಗಕರ್ಮಿ ರವಿರಾಜ್ ಎಚ್.ಪಿ., ಕಲಾವಿದ ಭಾಸ್ಕರ ಮಣಿಪಾಲ, ಕವಿ ಅಂಶುಮಾಲಿ ಮೊದಲಾದವರು ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!