ಸಂಘಟನೆ ಬಲವರ್ಧನೆ, ಸದಸ್ಯತ್ವ ವಿಸ್ತರಣೆ ಹಾಗೂ ರಾಜ್ಯವ್ಯಾಪಿ ಜಾಗೃತಿ ಕಾರ್ಯಕ್ರಮಗಳಿಗೆ ಒತ್ತು
ಬೆಂಗಳೂರು, ಜುಲೈ 5: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಕರ್ನಾಟಕ ರಾಜ್ಯ ಸಮಿತಿಯ ಸಭೆಯು ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಂಘಟನಾ ಚಟುವಟಿಕೆಗಳು, ಕಾರ್ಮಿಕರ ಸಮಸ್ಯೆಗಳು, ಸದಸ್ಯತ್ವ ವಿಸ್ತರಣೆ, ಅಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಿರುವ ಹೋರಾಟಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.


ಇತ್ತೀಚಿನ ದಿನಗಳಲ್ಲಿ ಕಾರ್ಮಿಕರು ಎದುರಿಸುತ್ತಿರುವ ವೇತನ ಅಸಮಾನತೆ, ಉದ್ಯೋಗ ಭದ್ರತೆಯ ಕೊರತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಸಮರ್ಪಕ ಅನುಷ್ಠಾನದಂತಹ ವಿಷಯಗಳ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ಸಭೆ ಆಗ್ರಹಿಸಿತು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುವ ಸಂಕಲ್ಪವನ್ನು ಸಭೆ ವ್ಯಕ್ತಪಡಿಸಿತು. ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ಹಾಗೂ ರಾಜ್ಯಮಟ್ಟದ ಅಭಿಯಾನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ರಾಜ್ಯ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಜಿ.ಕೆ. ಗುರುವಾಯನಕೆರೆ, ರಾಜ್ಯ ಕಾರ್ಯದರ್ಶಿಗಳಾದ ಸೆಯ್ಯದ್ ಅಲ್ತಾಫ್ (ಗುಲ್ಬರ್ಗ), ಸೆಯ್ಯದ್ ಮೂಸಾ (ಬೆಂಗಳೂರು), ರಾಜ್ಯ ಕೋಶಾಧಿಕಾರಿ ಉಬೈದುಲ್ಲಾ ಶರೀಫ್ (ಬೆಂಗಳೂರು), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬೂಬಕರ್ ಮದ್ದ, ಕಾದರ್ ಪರಂಗಿಪೇಟೆ, ಅಬ್ದುಲ್ ಹಮೀದ್ ಸಾಲ್ಮರ, ಹನೀಫ್ ಮೂಳೂರು, ಅಮೀನ್ ಸೇಟ್ (ಮೈಸೂರು), ಕಾಸಿಂ ರಬ್ಬಾನಿ (ಹಾವೇರಿ), ರಹಿಮಾನ್ ಬೋಳಿಯಾರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.


