ಕಡಬ ತಾಲೂಕಿನ ವ್ಯಾಪ್ತಿಯಲ್ಲಿರುವ ಐನೆಕಿದು, ಸುಬ್ರಮಣ್ಯ, ಬಿಳಿನೆಲೆ, ಶಿರಿಬಾಗಿಲು , ಕೊಂಬಾರು, ಕೊಣಾಜೆ , ಐತ್ತೂರು, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ ಮುಂತಾದ ಹತ್ತು ಗ್ರಾಮಗಳ ಅರಣ್ಯ ಮೀಸಲು ಅರಣ್ಯಗಳ ಜಂಟಿ ಸರ್ವೆ ನಡೆಸಿ ಕ್ರೂಡಿಕೃತ ದಾಖಲೆಗಳನ್ನು ಸಿದ್ದಪಡಿಸಿ ವರದಿ ನೀಡುವಂತೆ ಸರಕಾರ ಆದೇಶ ಮಾಡಿದ್ದು ನವೆಂಬರ್ ೧೦ ರಿಂದ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಂಟಿ ಸರ್ವೆಗೆ ಆದೇಶಿಸುವ ಮೂಲಕ ಈ ಭಾಗದ ರೈತರ ಬಹುದಿನಗಳ ಸಮಸ್ಯೆಗೆ ರಾಜ್ಯ ಸರಕಾರ ಸ್ಪಂದಿಸಿದೆ ಎಂದರು.
ಕಡಬ ತಾಲೂಕಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟೀ ಸರ್ವೆಯು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ರೈತಾಪಿ ಬಾಂಧವರು ತೀವೃ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಣ್ಯದಂಚಿನ ರೈತ ಭೂಮಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದರೂ ಅವರಿಗೆ ಆ ಭೂಮಿಗೆ ಯಾವುದೇ ಬ್ಯಾಂಕ್ಗಳಲ್ಲಿ ಸಾಲ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಪ್ಲಾಟಿಂಗ್ ಸಾಧ್ಯವಾಗದೆ ಮನೆ ಇನ್ನಿತರ ಕಟ್ಟಡ ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆ ಹಾಗೂ ಸ್ಥಳೀಯ ನಾಯಕರುಗಳು ಒಟ್ಟಾಗಿ ರಾಜ್ಯ ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರುಗಳಿಗೆ ಮನವರಿಕೆ ಮಾಡಿ ಜಂಟಿ ಸರ್ವೆಗೆ ಅಗ್ರಹಿಸಿದ್ದೆವು, ಪರಿಣಾಮ ಸಚಿವರು ಜಂಟಿ ಸರ್ವೆಗೆ ಸೂಚಿಸಿದ್ದಾರೆ. ಅದರಂತೆ ಅರಣ್ಯಗಳ ಹಾಗೂ ಕಂದಾಯದ ಜಂಟೀ ಸರ್ವೇ ನಡೆಸಿ ವರದಿ ಸಲ್ಲಿಸಲು ಆದೇಶಿಸಲಾಗಿದೆ. ಸುಬ್ರಹ್ಮಣ್ಯ, ಪಂಜ, ಉಪ್ಪಿನಂಗಡಿ ವಲಯ ಅರಣ್ಯಧಿಕಾರಿಗಳು, ಭೂದಾಖಲೆಗಳ ಭೂಮಾಪಕರು ಹಾಗೂ ಕಾರ್ಯ ಯೋಜನೆ ಮೋಜಣಿ ಭೂ ಮಾಪಕರಗಳ ಜಂಟೀ ಸರ್ವೇಗೆ ದಿನಾಂಕ ನಿಗದಿ ಪಡಿಸಲಾಗಿತ್ತು, ಈಗಾಗಲೇ ಜಂಟಿ ಸರ್ವೆ ಪ್ರಾರಂಭಗೊAಡಿದ್ದು, ವಿಪರೀತ ಮಳೆಯ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿತ್ತು. ಇದರ ಮುಂದುವರಿದ ಭಾಗವಾಗಿ ನವೆಂಬರ್ ೧೦ ರಿಂದ ಸರ್ವೆ ಕಾರ್ಯ ಪ್ರಾರಂಭಿಸುವAತೆ ಆದೇಶವನ್ನು ಮಾಡಲಾಗಿದೆ. ಎರಡು ತಂಡಗಳಲ್ಲಿ ಸರ್ವೆ ಕಾರ್ಯ ನಡೆಯಲಿದ್ದು, ಒಂದೇ ಸರ್ವೆ ನಂಬರಿನಲ್ಲಿ ಅತೀ ಹೆಚ್ಚು ಭೂಮಿ ಇರುವ ಪ್ರದೇಶದಿಂದ ಸರ್ವೆ ಪ್ರಾರಂಭಿಸಲಾಗುತ್ತದೆ. ಆ ಪ್ರಕಾರ ಬಿಳಿನೆಲೆ ಹಾಗೂ ಕೊಣಾಜೆ ಗ್ರಾಮಗಳಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ರೈತರು ಅದಿಕಾರಿಗಳಿಗೆ ಸೂಕ್ತ ಸಹಕಾರ ನೀಡಬೇಕೆಂದು ಸುಧೀರ್ ಕುಮಾರ್ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಭೂಪರಿವರ್ತನೆಗೊಂಡ ಭೂಮಿಯ ಏಕ ವನ್ಯಾಸ ನಕ್ಷೆ, ೯/೧೧ ಪಡೆಯಲು ಯೋಜನಾ ಪ್ರಾದಿಕಾರಕ್ಕೆ ಅಧಿಕಾರ ನೀಡಿರುವುದರಿಂದ ರೈತರಿಗೆ ಆಗುವ ಸಮಸ್ಯೆಯನ್ನು ಮನಗಂಡು ಅದನ್ನು ಹಿಂದಿನAತೆ ಗ್ರಾಮ ಪಂಚಾಯತಿಗೆ ಅಧಿಕಾರ ನೀಡಬೇಕೆನ್ನುವ ನಮ್ಮ ಮನವಿಗೆ ಸರಕಾರ ಈಗಾಗಲೇ ಪಂಚಾಯಿತಿಗೆ ವಹಿಸಲು ಮೌಖಿಕ ಆದೇಶ ನೀಡಿದೆ. ಶೀಘ್ರ ಅದು ಕಾರ್ಯ ರೂಪಕ್ಕೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದಿನೇಶ್, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾÊಕ್ ಮೇಲಿನಮನೆ, ಕುಕ್ಕೇ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು, ಕಾಂಗ್ರೇಸ್ ಸೋಶಿಯಲ್ ಮೀಡಿಯಾದ ಕಡಬ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕಳಿಗೆ, ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಭವ್ಯಾಸಂತೋಷ್, ಯುವ ಕಾಂಗ್ರೇಸ್ ಮುಖಂಡ ಸತೀಶ್ ಮೀನಾಡಿ ಮತ್ತಿತರರು ಉಪಸ್ಥಿತರಿದ್ದರು.