ಮಂಗಳೂರು:ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳು ಹಾಗೂ ಅಮೀನ್ ಕುಟುಂಬಿಕರ ಕಂಚಿದೀಪಾಲೆ ಮೂಲಸ್ಥಾನದಲ್ಲಿ ಗೀತಾ ಸುಕುಮಾರನ್ ಅವರ ಕೊಡುಗೆಯಲ್ಲಿ ನಿರ್ಮಾಣವಾದ ನೂತನ ಮಹಾದ್ವಾರವನ್ನು ಕದ್ರಿ ಯೋಗೀಶ್ವರ ಪೀಠಾಧಿಪತಿಗಳಾದ ಶ್ರೀ ನಿರ್ಮಾಲಾನಾಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು , ದೇವಾಲಯಗಳು , ಮಠಗಳು , ಮಂದಿರಗಳು ಶಕ್ತಿ ಕೇಂದ್ರಗಳ ಆರಾಧನೆ ತಾಣವಾಗಿದೆ . ಇವುಗಳು ಧರ್ಮ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತದೆ . ಧರ್ಮದ ರಕ್ಷಣೆಯ ಉದ್ದೇಶದಿಂದ ಇಂತಹಾ ದೇವಸ್ಥಾನಗಳು ಪ್ರಮುಖವಾಗಿ ಬೇಕಾಗುತ್ತದೆ ಎಂದರು .
ಸುಧಾಕರ್ ರಾವ್ ಪೇಜಾವರ ಈ ಸಂದರ್ಭದಲ್ಲಿ ಕದ್ರಿ ಕಂಚಿದೀಪಾಲೆ ಐತಿಹ್ಯವನ್ನು ತಿಳಿಸಿ , ಶ್ರೀ ಕದ್ರಿ ಕ್ಷೇತ್ರದ ಕಂಚಿದೀಪ ಆಕರ್ಷಣೆಯ ಇನ್ನೊಂದು ಮೆರುಗು ಶ್ರೀ ಕ್ಷೇತ್ರದ ಮುಂಭಾಗದಲ್ಲಿರುವ ಅತ್ಯಂತ ಪ್ರಾಚೀನ 18 ಅಂಕಣಗಳನ್ನು ಹೊಂದಿರುವ ಅತೀ ಎತ್ತರದ ಕಂಚಿ ದೀಪ ಸ್ತಂಭ. ಕಂಚಿ ದೀಪವನ್ನು ಪ್ರತಿ ವರ್ಷ 3 ಬಾರಿ ಹಚ್ಚಲಾಗುತ್ತಿದೆ. ಮೊದಲನೆಯದಾಗಿ ಜನವರಿ ತಿಂಗಳ ಮಕರ ಸಂಕ್ರಮಣ ದಿನದಂದು ಸಂಪೂರ್ಣವಾಗಿ 18 ಅಂಕಣಗಳನ್ನು ಕಂಚಿ ದೀಪಾಲೆ ಮರಳು ಧೂಮಾವತಿ ದೈವಸ್ಥಾನದ ಅಮೀನ್ ಕುಟುಂಬಸ್ಥರು ಹಾಗೂ ಕದ್ರಿ ಕೆಳಗಿನ ಮನೆಯ ಕುಟುಂಬಸ್ಥರು ಜತೆಗೂಡಿ ತಲಾ ತಲಾಂತರದಿಂದ ದೀಪವನ್ನು ಹಚ್ಚುತ್ತಾರೆ. ನಂತರ ಜಾತ್ರಾ ಮಹೋತ್ಸವದ 2ನೇ ದಿನದಂದು ಕೆಳಗಿನ 7 ಅಕಂಣಗಳನ್ನು ನಂತರ 3ನೇ ಬಾರಿಗೆ ಲಕ್ಷದೀಪ ಮಹೋತ್ಸವದಂದು ಹಚ್ಚಲಾಗುತ್ತದೆ.
ಧೂಮಾವತಿ ಎಂದೇ ಪ್ರತೀತಿಯಲ್ಲಿರುವ, ಶ್ರೀ ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನವು ಶ್ರೀ ಕ್ಷೇತ್ರದಿಂದ ದಕ್ಷಿಣಕ್ಕೆ 400 ಮೀಟರ್ ದೂರದಲ್ಲಿದ್ದು, ಶ್ರೀ ಕ್ಷೇತ್ರದಿಂದ ಮಲ್ಲಿಕಟ್ಟೆಗೆ ಹೋಗುವ ದಾರಿಯಲ್ಲಿ ಇದೆ. ಕಂಚಿದೀಪಾಲೆ ದೈವಸ್ಥಾನವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಕಾಲಾಂತರದಿಂದಲೂ ಬಿಲ್ಲವ ಸಮುದಾಯಕ್ಕೆ ಸೇರಿದ ಅಮೀನ್ ಕುಟುಂಬಸ್ಥರು ಆರಾಧಿಸುತ್ತಿರುವ ನಾಗದೇವರ ಮೂಲಸ್ಥಾನದೊಂದಿಗೆ, ಕಂಚಿದೀಪಾಲೆ ಶ್ರೀ ಮರಳು ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನಗಳಿವೆ. ದಕ್ಷಿಣ ಗ್ರಾಮಕ್ಕೆ ಗ್ರಾಮ ದೈವವಾಗಿ ಇಲ್ಲಿ ಮರಳು ಧೂಮಾವತಿ ದೈವವು ಪ್ರಧಾನವಾಗಿ ಆರಾಧಿಸಲ್ಪಟ್ಟರೆ, ಪರಿವಾರ ದೈವಗಳಾಗಿ ಮೈಸಂದಾಯ, ವೈದ್ಯನಾಥ, ಸಾರಾಳ ಧೂಮಾವತಿ ಬಂಟ, ಅಣ್ಣಪ್ಪ ಪಂಜುರ್ಲಿ ಹಾಗೂ ಭೈರವ ದೈವಗಳ ಆರಾಧನೆ ನಡೆದುಕೊಂಡು ಬರುತ್ತಿದೆ ಎಂದರು .
ದೈವ ಆರಾಧಕರಾದ ತಿಪ್ಪೇಶ್ ಅಮೀನ್ ಮಾತನಾಡಿ , ಕ್ಷೇತ್ರವು ತನ್ನದೇ ಮಹಿಮೆಯನ್ನು ಘನತೆಯನ್ನು ಹೊಂದಿದೆ . ಕಂಚಿದೀಪಾಲೆ ದೈವಸ್ಥಾನದಲ್ಲಿ ನೇಮೋತ್ಸವವು ಫೆಬ್ರವರಿ ೨೧ ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಕದ್ರಿ ದಕ್ಷಿಣ ಗ್ರಾಮ ದೈವ ಶ್ರೀ ಮರುಳು ಧೂಮಾವತಿ, ಮೈಸಂದಾಯ, ಭೈರವ ಹಾಗೂ ಅಮೀನ್ ಕುಟುಂಬ ಮೂಲಸ್ಥಾನ ದೈವಗಳಾದ ಶ್ರೀ ವೈದ್ಯನಾಥ, ಸಾರಾಳ ಧೂಮಾವತಿ ಬಂಟ, ಅಣ್ಣಪ್ಪ ಪಂಜುರ್ಲಿ ದೈವಗಳು ಭಕ್ತರಿಗೆ ದರ್ಶನವನ್ನು ನೀಡಲಿದೆ ಎಂದರು . ಮಕರ ಸಂಕ್ರಮಣ ದಿನದಂದು ಸಂಪೂರ್ಣವಾಗಿ 18 ಅಂಕಣಗಳನ್ನು ಕಂಚಿ ದೀಪಾಲೆ ಮರಳು ಧೂಮಾವತಿ ದೈವಸ್ಥಾನದ ಅಮೀನ್ ಕುಟುಂಬದವರು ಹಾಗೂ ಕದ್ರಿ ಕೆಳಗಿನ ಮನೆಯ ಕುಟುಂಬಸ್ಥರು ಸೇರಿ ದೀಪವನ್ನು ಹಚ್ಚಿಕೊಂಡು ಬರುವ ಪದ್ಧತಿ ಇದೆ ಎಂದರು
ಮಹಾದ್ವಾರದ ಲೋಕಾರ್ಪಣೆಯ ಸಮಯದಲ್ಲಿ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ , ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ , ರಾಜಕೀಯ ನಾಯಕರಾದ ಪದ್ಮರಾಜ್ ಪೂಜಾರಿ , ಕಿರಣ್ ಕುಮಾರ್ , ಧಾರ್ಮಿಕ ಮುಖಂಡರಾದ ಗುರು ಉಮೇಶ್ ನಾಥ್ ಜೋಗಿ , ರತ್ನಾಕರ್ ಜೈನ್ ಸಹಿತ ಮತ್ತಿತರು ಉಪಸ್ಥಿತರಿದ್ದರು .