ಮಂಗಳೂರು: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ₹23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬಜ್ಪೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ನಾಸರ್ @ ನಾಸಿರ್ @ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಎಂದು ಗುರುತಿಸಲಾಗಿದೆ. 23-09-2025ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ನಿವಾಸಿ ಮೊಹಮ್ಮದ್ ಷರೀಫ್ ಅವರು ತಮ್ಮ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕಾಗಿ ಕಳವಾರಿಗೆ ತೆರಳಿದ್ದ ವೇಳೆ, ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ ಸುಮಾರು ₹23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹1,25,000 ನಗದು ಹಣ ಕಳ್ಳತನವಾಗಿತ್ತು.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ.176/2025 ಅಡಿಯಲ್ಲಿ BNS 2023ರ ಕಲಂ 331(3), 331(4), 305ರಂತೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ಪ್ರಮುಖ ಆರೋಪಿಯಾಗಿದ್ದ ಅಬ್ದುಲ್ ನಾಸರ್ @ ನಾಚಿ ಕಳ್ಳತನದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು LOC ಹೊರಡಿಸಿದ್ದರು.
LOC ಆಧಾರದಲ್ಲಿ ಅಬ್ದುಲ್ ನಾಸರ್ ಅನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ, ದೂರುದಾರರ ಸಂಬಂಧಿ ಮಯ್ಯದ್ದಿ ಇಮ್ರಾನ್ ಜೊತೆಗೆ ಸೇರಿ ಕಳ್ಳತನ ನಡೆಸಿರುವುದಾಗಿ ಆರೋಪಿತನು ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ ಸುಮಾರು ₹27 ಲಕ್ಷ ಮೌಲ್ಯದ 222 ಗ್ರಾಂ ತೂಕದ ಚಿನ್ನಾಭರಣ, ₹20,000 ನಗದು ಹಣ ಹಾಗೂ ಸುಮಾರು ₹50,000 ಮೌಲ್ಯದ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.