ಮಂಗಳೂರು,ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್(ರಿ) ನಿರ್ದೇಶಕ ವಿದ್ವಾನ್ ಯು. ಕೆ. ಪ್ರವೀಣ್ ಅವರ ಶಿಷ್ಯೆ ಕುಮಾರಿ ರಾಶಿ ರಾಜೇಶ್ ಹೆಗ್ಡೆ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಮೇ 17ರಂದು ರವಿವಾರ ಸಂಜೆ 4.30ಕ್ಕೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ವಿದ್ವಾನ್ ಯು. ಕೆ. ಪ್ರವೀಣ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 13 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ರಾಶಿ ರಾಜೇಶ್ ಹೆಗ್ಡೆ ಅವರು ಪುಷ್ಪಾಂಜಲಿ, ಶ್ಲೋಕ, ಜತಿಸ್ವರ, ವರ್ಣಂ, ಪದಂ, ದೇವಿಸ್ತುತಿ ಹಾಗೂ ತಿಲ್ಲಾನ ಸೇರಿದಂತೆ ಭರತನಾಟ್ಯದ ವಿವಿಧ ಮಾರ್ಗ ಪದ್ಧತಿಯ ನೃತ್ಯಗಳನ್ನು ಪಂದನಲ್ಲೂರು ಶೈಲಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಪ್ರದರ್ಶಿಸಲಿದ್ದಾರೆ ಎಂದರು.
ರಂಗಪ್ರವೇಶ ಕಾರ್ಯಕ್ರಮಕ್ಕೆ ನಟ್ಟುವಾಂಗದಲ್ಲಿ ಗುರು ವಿದ್ವಾನ್ ಯು. ಕೆ. ಪ್ರವೀಣ್, ಗಾಯನದಲ್ಲಿ ವಿದುಷಿ ಉಷಾ ಪ್ರವೀಣ್ ಹಾಗೂ ಕುಮಾರಿ ಆರಾಧನಾ ಎನ್. ಕೆ., ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರಂ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರಾಚಾರ್ ಪಾಡಿಗಾರು, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ವಿ. ಪಿ. ಕಾಂಜಂಗಡ್ ಹಾಗೂ ಖಂಜರದಲ್ಲಿ ವಿದ್ವಾನ್ ಯು. ಪಿ. ಶರಣ್ ಸಹಕರಿಸಲಿದ್ದಾರೆ ಎಂದು ಹೇಳಿದರು.
ಶರವು ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ ರಾಘವೇಂದ್ರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಎ. ಬಿ. ಶೆಟ್ಟಿ ದಂತ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ. ಮಿತ್ರ ಎನ್. ಹೆಗ್ಡೆ ಹಾಗೂ ಜೀವ ವಿಮಾ ನಿಗಮ ಉಡುಪಿ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಗಣಪತಿ ಎನ್. ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಆರ್. ಹೆಗ್ಡೆ, ಉಷಾ ಪ್ರವೀಣ್ ಹಾಗೂ ರಾಶಿ ಆರ್. ಹೆಗ್ಡೆ ಉಪಸ್ಥಿತರಿದ್ದರು.