ಕೊಣಾಜೆ: ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ದೀನ್ ದಯಾಳ್ ವಿದ್ಯಾರ್ಥಿಗಳ ವಸತಿ ಸಮುಚ್ಚಯ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ಈ ಹಾಸ್ಟೆಲ್ ಕಟ್ಟಡವು ಕರಾವಳಿಯಲ್ಲಿಯೇ ಅತ್ಯಂತ ಬೃಹತ್ತಾದ ವಸತಿ ಸಮುಚ್ಚಯವಾಗಿದೆ. ಸುಮಾರು ಆರು ಸುವ್ಯವಸ್ಥಿತ ಕಟ್ಟಡದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಅದು ಪೂರ್ಣಗೊಂಡ ಕೂಡಲೇ ಈ ಕಟ್ಟಡಗಳು ಉದ್ಘಾಟನೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್, ತಾಲೂಕು ಕಲ್ಯಾಣ ಅಧಿಕಾರಿ ಎಂ ಗಣೇಶ ನಾಯ್ಕ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ನಿತೇಶ್ , ಕಣಚೂರು ಮೆಡಿಕಲ್ ಅಕಾಡೆಮಿಯ ನಿರ್ದೆಶಕರಾದ ಕಣಚೂರು ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಕಾರ್ಯದರ್ಶಿ ಎ.ಕೆ.ರಹ್ಮಾನ್ ಕೋಡಿಜಾಲ್,ಅಬ್ದುಲ್ ನಾಸೀರ್ ಕೆಕೆಎಸ್ ಮೊದಲಾದವರು ಉಪಸ್ಥಿತರಿದ್ದರು.