ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಇನ್ನಾದರೂ ಬಡವರಿಗೆ ಸೂರು ಕಲ್ಪಿಸಿ:- ಶಾಸಕ ಕಾಮತ್

ಮಂಗಳೂರಿನ ಶಕ್ತಿನಗರದಲ್ಲಿ ತಮಗೊಂದು ಮನೆ ನಿರ್ಮಾಣವಾಗುತ್ತದೆಂದು 2017ರಿಂದಲೂ ಬಡಜನರು ಹಕ್ಕುಪತ್ರಗಳನ್ನು ಹಿಡಿದುಕೊಂಡು ಆಸೆ ಕಂಗಳಿಂದ ಕಾಯುತ್ತಿದ್ದು, ಇದೀಗ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದ್ದು ಪ್ರಸ್ತುತ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ದಲ್ಲಾದರೂ ಆ ಬೇಡಿಕೆ ಈಡೇರಿಸಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಈ ಭಾಗದ ಹಿಂದಿನ ಶಾಸಕರು 2017 ರಲ್ಲೇ 930 ಬಡ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟು ತರಾತುರಿಯಲ್ಲಿ, ಕಾಮಗಾರಿಯ ಗುದ್ದಲಿ ಪೂಜೆ ಸಹ ಮಾಡಿ ಬಿಟ್ಟಿದ್ದರು. ಆದರೆ ಉದ್ದೇಶಿತ ಯೋಜನೆಯ ಪ್ರದೇಶವು ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ಸಹಜವಾಗಿ ಅರಣ್ಯ ಇಲಾಖೆ ತಡೆ ನೀಡಿ ಅಂದಿನಿಂದ ಇಂದಿನವರೆಗೆ ಬಡಕುಟುಂಬಗಳು ಹಕ್ಕು ಪತ್ರವನ್ನು ಹಿಡಿದುಕೊಂಡು ಅಲೆದಾಡುವಂತಾಗಿತ್ತು. ನಾನು ಆ ಭಾಗದ ಶಾಸಕನಾದ ನಂತರ, ಫಲಾನುಭವಿಗಳ ಪರವಾಗಿ ಸರ್ಕಾರ, ಅರಣ್ಯ ಇಲಾಖೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸತತ ಚರ್ಚೆ ನಡೆಸಿ ಅಂತಿಮವಾಗಿ 4 ವರ್ಷಗಳ ನಂತರ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ಇದ್ದ ಡೀಮ್ಡ್ ಫಾರೆಸ್ಟ್ ಸಹಿತ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದೇನೆ ಎಂದರು.

ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಯನ್ನು ಸಹ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದ್ದು, ಇನ್ನಾದರೂ ದಯವಿಟ್ಟು ಈ ಬಗ್ಗೆ ಗಮನಹರಿಸಿ ಆದ್ಯತೆಯ ಮೇರೆಗೆ ಬಡವರ ಸೂರಿಗೆ ಕ್ರಮಕೈಗೊಳ್ಳಿ ಎಂದರು. ಇದಕ್ಕೆ ಉತ್ತರಿಸಿದ ಸಚಿವ ಜಮೀರ್ ಅಹ್ಮದ್, ಶಾಸಕರು ಹೇಳಿದ್ದೆಲ್ಲವೂ ಸರಿಯಾಗಿದೆ. ಕೂಡಲೇ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!