ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡ ಓದಲು ಬರೆಯಲು ಬಾರದ ಅಧಿಕಾರಿ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ. ಕೇರಳ ಮೂಲದ ಮಹಿಳೆಯು ಕೇರಳದ ಮಲಯಾಳಂ ಮಾಧ್ಯಮದಲ್ಲಿ ವಿಧ್ಯಾಭ್ಯಾಸವನ್ನು ಮಾಡಿರುವುದು ಕನ್ನಡ, ತುಳು ಭಾಷೆ ಬಾರದಿರುವುದು ಜನಸಾಮಾನ್ಯರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಕನ್ನಡ ಸಂಘಗಳ ಆಕ್ರೋಶವಾಗಿದೆ. ಕೆ.ಸಿ.ಎಸ್.ಆರ್ ನಿಯಮಗಳು 1974ರಲ್ಲಿ ಸರಕಾರಿ SSLC/10ನೇ ತರಗತಿಯಲ್ಲಿ ಕನ್ನಡ ಭಾಷೆ ವಿಷಯವನ್ನು ಓದಿರಬೇಕು ಅಥವಾ ತತ್ಸಮಾನ ನೌಕರಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿಯಮವಿದೆ.
ಈ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಕನ್ನಡ ಭಾಷೆಯ ಸಾಮಾನ್ಯ ಪರಿಜ್ಞಾನವಿಲ್ಲದ ಮಲಯಾಳಿ ಮಹಿಳೆಯನ್ನು ಯಾವುದೋ ರಾಜಕೀಯ ಒತ್ತಡ ಹಾಗೂ ದುರುದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಕಾನೂನು ಅಧಿಕಾರಿಯಾಗಿ ನೇಮಕ ಮಾಡಲು ಹೊರಟಿರುವುದು ಕನ್ನಡ ನಾಡು ಹಾಗೂ ಕನ್ನಡ ಭಾಷೆಗೆ ಮಾಡುವ ಅಗೌರವ, ಅವಮಾನ ಹಾಗೂ ಈ ಕನ್ನಡ ನಾಡಿನ ಕಾನೂನಿನಡಿಯಲ್ಲಿ ಅಕ್ಷಮ್ಯ ಅಪರಾಧವಾಗಿರುತ್ತದೆ ಎಂಬ ಆರೋಪ ಕೇಳಿಬಂದಿದೆ.